Visitors

ವಿಶ್ವೇಶಭಟ್ಟರು ಹೋದರು ಶಶಿಧರ್ ಭಟ್ಟರು ಬಂದರು !

ಕಳೆದ ವಾರ ವಿಜಯಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರು ರಾಜೀನಾಮೆ ಕೊಟ್ಟಾಗ ನನ್ನ ಗೆಳತಿಯೊಬ್ಬಳು ಪ್ರತಿಕ್ರಿಯಿಸಿದ್ದು ಹೀಗೆ; ಇದು ಪತ್ರಿಕೋದ್ಯಮದ ನೈತಿಕತೆಗೆ ಸಿಕ್ಕಿದ ಜಯ.

ಈ ಮಾತು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಇತ್ತೀಚಿಗಿನ ವರ್ಷಗಳಲ್ಲಿ ಪತ್ರಿಕಾರಂಗವು ಒಂದು ಉದ್ಯಮವಾಗಿ ಬೆಳೆದ ಬಗೆ ಮತ್ತು ಅದರ ಲಾಭಾಂಶವನ್ನು ಪಡೆಯುತ್ತಿರುವ ದೊಡ್ಡ ಪಡೆ ಸೃಷ್ಟಿಯಾಗಿರುವುದನ್ನು ಗಮನಿಸಿದಾಗ ಇದರಲ್ಲಿ ಹುರುಳಿದೆ ಎನಿಸದಿರದು.

ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಾಂಗಗಳ ಜೊತೆಗೆ ಪತ್ರಿಕಾರಂಗವನ್ನು ನಾಲ್ಕನೆಯ ಸ್ತಂಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ನಾಲ್ಕು ಸ್ತಂಭಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಹಾಗಾಗುತ್ತಿದೆಯೇ?

ಆಳುವ ದೊರೆಗಳು ದಾರಿ ತಪ್ಪಿದಾಗ ಜನ ಮಾಧ್ಯಮದತ್ತ ನೋಡುತ್ತಾರೆ. ಆದರೆ ಸಮಾಜದ ಸಾಕ್ಷಿಪ್ರಜ್ನೆಯಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಒಂದು ಪಕ್ಷದ, ಒಂದು ವ್ಯಕ್ತಿಯ ತುತ್ತೂರಿಯಾಗಿಬಿಟ್ಟರೆ....?ಪತ್ರಕರ್ತರು ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ಹೆಣ್ಣು -ಹೊನ್ನು-ಮಣ್ಣನ್ನು ಪುಕ್ಕಟೆಯಾಗಿ ಪಡೆದುಕೊಳ್ಳಲು ಮಾಧ್ಯಮವನ್ನು ಅಸ್ತ್ರದಂತೆ ಬಳಸತೊಡಗಿದರೆ....?ಗುಂಪುಗಾರಿಕೆ, ಸ್ವಜನಪಕ್ಷಪಾತದಲ್ಲಿ ರಾಜಕಾರಣಿಗಳನ್ನೂ ಮೀರಿಸತೊಡಗಿದರೆ.....?ಜನರು ಮಾಧ್ಯಮವನ್ನು ಸಂಶಯದಿಂದಲೇ ನೋಡುತ್ತಾರೆ. ಸಾಮಾಜೀಕ ನ್ಯಾಯ ಎಂಬ ಪರಿಕಲ್ಪನೆಯೇ ಹುಸಿಯಾಗುತ್ತದೆ.

ರಾಡಿಯಾ ಟೇಪ್ ಹಗರಣದಿಂದ ಹಿಡಿದು ವಿಶ್ವೇಶಭಟ್ಟರ ರಾಜೀನಾಮೆ ಪ್ರಕರಣದವರೆಗೆ ಜನ ಮುಕ್ತವಾಗಿ ಮಾತಾಡುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಆದರೆ ಮಾಧ್ಯಮ ಇದರ ಬಗ್ಗೆ ಮುಗುಮ್ಮಾಗಿ ಮುಸುಕು ಹೊದ್ದು ಕುಳಿತಿದೆ. ತಮ್ಮ ಸ್ವಂತದ ಪೇಸ್ ಬುಕ್, ಬ್ಲಾಗ್ ಗಳಲ್ಲಿಯೂ ಬರೆಯಲೂ ಹೆದರುತ್ತಿದ್ದಾರೆ. ರಾಜಕಾರಣಿಗಳಂತೂ ಪತ್ರಕರ್ತರ ಸಹವಾಸದಿಂದಲೇ ದೂರವಿದ್ದರೆ ಒಳಿತು ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ಟೆರರಿಸಂ ಎಂದರೆ ಇದೇ ಇರಬಹುದೇ?

ಇಂತಹ ಸನ್ನಿವೇಶದಲ್ಲಿ ’ಸಮಯ ನ್ಯೂಸ್’ ವಾಹಿನಿಯ ಮುಖ್ಯಸ್ಥರಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಟ್ಟರು ’ಸುವರ್ಣ ನ್ಯೂಸ್’ ಚಾನಲ್ ಅನ್ನು ಕಟ್ಟಿ ಬೆಳೆಸಿದ್ದರು. ಅನಂತರ ಅದನ್ನು ಎಚ್.ಆರ್. ರಂಗನಾಥ್ ಆಕ್ರಮಿಸಿಕೊಂಡಿದ್ದರು.

ಸುವರ್ಣ ನ್ಯೂಸ್ ಚಾನಲ್ ಆರಂಭಗೊಂಡಾಗ ಭಟ್ಟರು ಸೂತ್ರದ ಗೊಂಬೆಯಂತಿದ್ದರು. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿ ರಾಜೀವ ಚಂದ್ರಶೇಖರ ಚಾನಲ್ ಮಾಲೀಕರಾಗಿದ್ದರು. ಹಿರಿಯ ನಟಿ ಮೈನಾವತಿ ಮಗ ಶ್ಯಾಮಸುಂದರ್ ಸಿಇಓ ಆಗಿದ್ದರು. ಅವರ ನಿಧನದ ನಂತರ ಸಿಇಓ ಆಗಿ ಬಂದವರು ಸಂಜಯಪ್ರಭು. ಅವರಿಗೆ ಕನ್ನಡ ಬಾರದು. ಕನ್ನಡ ಬಾರದ ಮಾಲೀಕ ಮತ್ತು ಸಿಇಓ. ಅವರ ದೃಷ್ಟಿಯಲ್ಲಿ ಪತ್ರಕರ್ತರು ಕೂಡಾ ಕಾರ್ಮಿಕರೇ.
ಚಾನಲ್ ನಲ್ಲೇ ಗುಂಪುಗಳಾದವು. ಭಟ್ಟರ ವಿರುದ್ಧ ಗುಂಪನ್ನು ಸಿಇಓ ಎತ್ತಿಕಟ್ಟಿದರು. ಈ ಸಮಯದಲ್ಲೇ ಕನ್ನಡಪ್ರಭದ ರಂಗನಾಥ್ ಚಾನಲ್ ಮುಖ್ಯಸ್ಥರಾದರು. ಪತ್ರಕರ್ತರಾಗಿದ್ದೂ ಬ್ಯುಸಿನೆಸ್ ಮ್ಯಾನ್ ಆಗಿರುವ ರಂಗನಾಥ್ ಮಾಲೀಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾ ಪರಸ್ಪರ ಆಸರೆಯಾಗತೊಡಗಿದರು. ಶಶಿಧರ್ ಭಟ್ ರನ್ನು ಜ್ಯುಪಿಟರ್ ಗೆ ವರ್ಗಯಿಸಲಾಯ್ತು. ಕನ್ನಡಪ್ರಭದಿಂದ ಜೋಗಿ, ರವಿಹೆಗ್ಡೆ, ಉದಯ ಮರಕಿಣಿ ಸೇರಿದಂತೆ ಸುಮಾರು ೫೦ ಜನರ ದಂಡು ಸುವರ್ಣಕ್ಕೆ ಧಾಳಿಯಿಟ್ಟಿತು. ಖರ್ಚು ದುಪ್ಪಟ್ಟಾಯಿತು. ಕೆಲಸವಿಲ್ಲದೆ ಕುಳಿತ್ತಿದ್ದ ಭಟ್ಟರು ಸುವರ್ಣ ಗ್ರೂಪ್ ಬಿಟ್ಟು ಹೊರನಡೆದರು.

ಈಗ ಶಶಿದರ್ ಭಟ್ ಸಮಯ ನ್ಯೂಸ್ ಚಾನಲ್ ಹೆಡ್ ಆಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿದ್ದಂತೆ ನಿರಾಯುಧರಲ್ಲ. ಶಸ್ತ್ರ ಸಜ್ಜಿತರಾಗಿ ಬಂದಿದ್ದಾರೆ. ಜೊತೆಗೆ ಕೈಯಲ್ಲಿ ಕತ್ತರಿ ಇದೆ.
ಅಲ್ಲಿ ವಿಜಯಕರ್ನಾಟಕದಲ್ಲಿ ತಾತ್ಕಾಲಿಕ ಸಂಪಾದಕರಾಗಿರುವ ಇ. ರಾಘವನ್ ಅವರು ಶುದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಸ ಸಂಪಾದಕರ ಆಗಮನವನ್ನು ಪತ್ರಿಕೆ ಕಾಯುತ್ತಿದೆ. ಕಳಂಕ ರಹಿತ, ಪ್ರಾಮಾಣಿಕ ಪತ್ರಕರ್ತರಾದ ದಿನೇಶ್ ಅಮಿನಮಟ್ಟು ಹೆಸರು ಮುಂಚೂಣಿಯಲ್ಲಿದೆ. ಅವರು ಆ ಹುದ್ದೆಯನ್ನು ಅಲಂಕರಿಸಿದರೆ ನಿಜವಾಗಿಯೂ ನಿಶಾದ ಕಂಜರಿ ಖುಷಿ ಪಡುತ್ತಾಳೆ.

ದೃಶ್ಯ ಮಾಧ್ಯಮದಲ್ಲಿ ಶಶಿಧರ್ ಭಟ್, ಮುದ್ರಣ ಮಾಧ್ಯಮದಲ್ಲಿ ಅಮಿನಮಟ್ಟು. ಆಗ ನನ್ನ ಗೆಳತಿ ಹೇಳಿದ ಮಾತು ನಿಜವಾಗುತ್ತದೆ ’ಇದು ಪ್ರಾಮಾಣಿಕ ಪತ್ರಿಕೋಧ್ಯಮಕ್ಕೆ ಸಿಕ್ಕ ನೈತಿಕ ಜಯ’
ಆದರೆ ಹಾಗಾಗುತ್ತದೆಯೇ? ಕಷ್ಟ ಸಾಧ್ಯ.
ಯಾಕೆಂದರೆ ಕನ್ನಡ ಪತ್ರಿಕೋದ್ಯಮ ತುಂಬಾ ಚಿಕ್ಕ ಕ್ಷೇತ್ರ. ಕಳಂಕಿತರೆಲ್ಲಾ ಮತ್ತೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಿರುವ ವಿಚಾರ ನಿಷಾದ ಕಂಜರಿಗೆ ಗೊತ್ತಾಗಿದೆ. ಇರಲಿ. ಭೂಮಿ ಗುಂಡಗಿದೆ. ಎಲ್ಲಾದರೂ ಒಂದು ಕಡೆ ನಾವು ಸಂಧಿಸಲೇ ಬೇಕು!

ಬ್ರೇಕಿಂಗ್ ನ್ಯೂಸ್; ಸುವರ್ಣದಿಂದ ಶಶಿಧರ್ ಭಟ್ ಹೊರಕ್ಕೆ....?

ಕೊನೆಗೂ ಎಚ್ ಆರ್ ರಂಗನಾಥ್ ಶಶಿಧರ್ ಭಟ್ ಅವರನ್ನು ಸುವರ್ಣ ಗ್ರೂಪಿನಿಂದ ಹೊರದೂಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇವತ್ತು ಬೆಳಿಗ್ಗೆ ಭಟ್ಟರನ್ನು ಅವರ ಅಪೀಸಿನಲ್ಲಿ ಕಂಡ ಸಿ.ಇ. ಒ ಸಂಜಯ ಪ್ರಭು, ನಿಮ್ಮ ಮೇಲೆ ಸುವರ್ಣ ನ್ಯೂಸ್ ಮುಖ್ಯಸ್ಥರಾದ ರಂಗನಾಥ್ ಹತ್ತು ಆರೋಪಗಳನ್ನು ಮಾಡಿದ್ದಾರೆ. ಅದಕ್ಕಾಗಿ ನೀವು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರಂತೆ. ಅದಕ್ಕೆ ಭಟ್ಟರು, ನೀವು ಅವರನ್ನು ನಂಬುತ್ತಿರಿ ಅಂದ ಮೇಲೆ ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಎಂದು ಸಂಸ್ಥೆಯಿಂದ ಹೊರಬಂದಿದ್ದಾರೆ.

ಭಟ್ಟರನ್ನು ಹೊರಹಾಕಲು ರಂಗನಾಥನಿಗೆ ಸಿಕ್ಕ ಪ್ರಮುಖ ಕಾರಣವೇನು ಗೊತ್ತಾ? ಸಮಯ ನ್ಯೂಸ್ ಚಾನಲ್ ನ ಉದ್ಘಾಟನೆಯಂದು ಅದರ ಮಾಲೀಕರಾದ ಜಾರಕಿ ಹೊಳೆಯವರು ಭಟ್ಟರನ್ನು ಕೃತಜ್ನತೆಯಿಂದ ಸ್ಮರಿಸಿಕೊಂಡದ್ದು. ಕೃತಜ್ನತೆ ಎಂದರೆನೆಂಬುದು ರಂಗನಾಥನಿಗೆ ಅರ್ಥವಾಗದ ಪದ [ಹೆಚ್ಚಿನ ವಿವರಕ್ಕೆ ಇದೇ ಬ್ಲಾಗಿನಲ್ಲಿ ’ರಂಗನಾಥನೆಂಬ ಸಂಕೇತಿಯೂ ಶಶಿಧರ ಭಟ್ಟರೂ..” ಎಂಬ ಪೋಸ್ಟ್ ಅನ್ನು ನೋಡಿ] ಸುಮಾರು ಹನ್ನೆರಡು ವರ್ಷಗಳ ಹಿಂದೆ-ಆಗ ಭಟ್ಟರು ಝೀ ಟೀವಿ ಮಾಲಕತ್ವದ ಕಾವೇರಿ ಚಾನಲ್ ನ ಮುಖ್ಯಸ್ಥರಾಗಿದ್ದರು-] ಜಾರಕಿ ಹೊಳೆಯವರ ಕೋರಿಕೆಯ ಮೇರೆಗೆ ಕನ್ನಡದಲ್ಲಿ ಚಾನಲ್ಲೊಂದನ್ನು ಪ್ರಾರಂಭಿಸುವುದರ ಕುರಿತಾಗಿ ವಿವರವಾದ ಯೋಜನಾ ವರಧಿಯೊಂದನ್ನು ಸಲ್ಲಿಸಿದ್ದರು. ಸಮಯ ಚಾನಲ್ ಆರಂಭಿಸುವುದಕ್ಕೆ ಅದೇ ತಮಗೆ ಸ್ಪೂರ್ತಿಯಾಗಿತ್ತು ಎಂದು ಅವರು ಕೃತಜ್ನತೆಯಿಂದ ನೆನೆಸಿಕೊಂಡಿದ್ದಾರೆ. ಅದು ಸಮಯ ಚಾನಲ್ ನಲ್ಲಿ ಪ್ರಸಾರವಾಗಿದೆ.

ರಂಗನಾಥ್ ಜಾರಕಿಹೊಳೆಯವರ ಭಾಷಣವನ್ನು ಎಡಿಟ್ ಮಾಡಿಸಿ ಸುವರ್ಣದ ಮಾಲಕರಾದ ರಾಜೀವ್ ಚಂದ್ರಶೇಖರ್ ಅವರಿಗೆ ಕಳುಹಿಸಿದ್ದಾರೆ. ಅದರ ಜೊತೆಗೆ ಭಟ್ಟರ ಮೇಲೆ ಹತ್ತು ಅಪಾದನೆಗಳನ್ನು ಹೊರಿಸಿದ್ದಾರೆ. ಅದರ ಮುಖ್ಯ ತಿರುಳೆಂದರೆ ಭಟ್ಟರು ಚಾನಲ್ಲಿನಲ್ಲಿ ಇದ್ದುಕೊಂಡೇ ಅದರ ಅದಪತನಕ್ಕೆ ಹೇಗೆ ಕಾರಣರಾಗುತ್ತಿದ್ದಾರೆ ಎಂಬುದು. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಸುವರ್ಣದ ಮುಖ್ಯಸ್ಥರಿಗೆ ರಂಗನಾಥ ಹೇಳಿದುದೆಲ್ಲಾ ವೇದ ವಾಕ್ಯವಾಗುತ್ತಿದೆ.

ಪತ್ರಿಕಾರಂಗವನ್ನು ಉದ್ಯಮವೆಂದು ಪರಿಗಣಿಸುವವರಿಗೆ ಪತ್ರಕರ್ತರು ಮತ್ತುದಲ್ಲಾಳಿಗಳ ನಡುವೆ ವ್ಯತ್ಯಾಸ ಗೊತ್ತಾಗಲಾರದು. ಅದರ ಪ್ರಯೋಜನವನ್ನು ಈಗಿನ ಬಹಳಷ್ಟು ಪತ್ರಕರ್ತರು ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಪತ್ರಿಕಾರಂಗವನ್ನು ಸೇವಾಕ್ಷೇತ್ರವೆಂದು ಈಗಲೂ ನಂಬಿರುವ ಕೆಲವು ಮನಸ್ಸುಗಳಿಗಾಗುತ್ತಿರುವ ಆಘಾತ.

ಜೋಕರ್ ಗಳಾದ ಜರ್ನಲಿಸ್ಟ್ ಗಳು





ಇಂದು ಏಪ್ರಿಲ್ ೧. ಮೂರ್ಖರ ದಿನವಂತೆ. ಅಂತೆ ಎನ್ನಲು ಕಾರಣವಿದೆ. ಈಗ ಯಾರೂ ಮೂರ್ಖರ ದಿನ ಆಚರಿಸುವುದಿಲ್ಲ. ಅದು ಅಪ್ರಬುದ್ಧರ ಬಾಲಿಷ ಆಚರಣೆ; ಏನೂ ಮಾಡಲು ಕೆಲಸವಿಲ್ಲದವರು ಹೊತ್ತು ಕಳೆಯಲು ಆಡುವ ಮೋಜಿನಾಟ ಇದು. ಅಂತಹ ಮೋಜಿನಾಟವನ್ನು ಇಂದು ಕನ್ನಡದ ಸುದ್ದಿ ಚಾನಲ್ಲೊಂದು ಆಡಿತು.

ಜಗತ್ತಿನ ಆಗುಹೋಗುಗಳ ಬಗ್ಗೆ ಆಸಕ್ತಿಯಿರುವ ಬಹುತೇಕ ಮಂದಿ ಪ್ರೈಮ್ ಟೈಮ್ ನಲ್ಲಿ ಬರುವ ಸುದ್ದಿಯನ್ನು ವೀಕ್ಷಿಸುತ್ತಾರೆ. ನಾನು ಕೂಡಾ ಇಂದು ೭ ಘಂಟೆಗೆ ಟೀವಿ ಆನ್ ಮಾಡಿದೆ. ’ ಜನಾರ್ಧನ ರೆಡ್ಡಿ ರಾಜಿನಾಮೆ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ; ಕೇಂದ್ರ ನಾಯಕರ ಸಭೆ’ ಎಂಬ ಬ್ರೇಕಿಂಗ್ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿತ್ತು.

ಸಂಜೆಯ ಜಡತ್ವ, ಆಲಸಿತನ ಎಲ್ಲವೂ ತಟ್ಟನೆ ಹಾರಿ ಹೋಗಿ ಕಣ್ಣು, ಕಿವಿ ಚುರುಕಾಯಿತು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಚಾನಲ್ ಗಳನ್ನೆಲ್ಲಾ ಜಾಲಾಡಿದೆ. ಎಲ್ಲಿಯೂ ಆ ಸುದ್ದಿಯ ಸುಳಿವೇಇಲ್ಲ. ಪುನಃ ಅದೇ ಚಾನಲಿಗೆ ಬಂದಾಗ ದೇವೆಗೌಡರು ಪೋನೊದಲ್ಲಿದ್ದರು. ಆ ಮಾತಿನ ವರಸೆ ಕೇಳಿದಾಗ, ಇದು ಗೌಡರಲ್ಲವಲ್ಲಾ ಎನಿಸುತ್ತಿತ್ತು. ಮುಂದೆ ದೇಶಪಾಂಡೆ ಪೋನಿಗೆ ಬಂದರು. ಸಂಶಯ ಹೆಚ್ಚಾಯಿತು. ಖರ್ಗೆ ಪೋನಿಗೆ ಬಂದಾಗ ಇದು ಚಾನಲ್ ನವರು ವಿಕ್ಷಕರನ್ನು ಫೂಲ್ ಮಾಡಲು ನಡೆಸಿದ ಮೂರ್ಖರಾಟ ಎಂದು ಕನ್ಫರ್ಮ್ ಆಯ್ತು. ’ಥೂ ಇವ್ರಾ’ ಎಂದು ಪತ್ರಿಕೋದ್ಯಮದ ಬೇಜವಾಬ್ದರಿತನದ ಬಗ್ಗೆ ಗೊಣಗಿಕೊಂಡೆ. ಅದನ್ನು ಆಲಿಸಿದ ಪಕ್ಕದ ಮನೆಯ ಎಂಟನೆ ಕ್ಲಾಸಿನ ಚೇತೂ ’ನಾವೇ ಏಪ್ರೀಲ್ ಫೂಲ್ ಮಾಡೊಲ್ಲ. ಅವರಿಗೆ ಬುದ್ಧಿ ಇಲ್ವಾ ಆಂಟಿ?’ ಎಂದು ಪ್ರಶ್ನಿಸಿದ.

ಪತ್ರಿಕೆಯಲ್ಲಿ, ಸುದ್ದಿ ಚಾನಲ್ ಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಟೀಮ್ ವರ್ಕ್. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆ ದಂಡ ತೆರಬೇಕಾಗುತ್ತದೆ. ಆದರೆ ಚಾನಲ್ ಮುಖ್ಯಸ್ಥರೆ ಇಂತಹ ಬೇಜವಾಬ್ದಾರಿತನಕ್ಕೆ ಬೆಂಗಾವಲಾಗಿ ನಿಂತರೆ..?ಅವರೇ ಹಿಂದೆ ಕುಳಿತು ಇದನ್ನೆಲ್ಲಾ ಎಂಜಾಯ್ ಮಾಡುತ್ತಿದ್ದುದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ನೀಡುವ ಸುದ್ದಿ ಯಾವ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಟ ಅರಿವಿದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಏಪ್ರಿಲ್ ೧ರಂದು ಓದುಗರನ್ನು ಮೂರ್ಖರನ್ನಾಗಿ ಮಾಡುವ ಕೆಟ್ಟ ಚಾಳಿ ಆರಂಭಿಸಿದ ಕೀರ್ತಿ ಸೇರಬೇಕಾದ್ದು ಈಶ್ವರ ದೈತೋಟರಿಗೆ ಅವರು ಸಂಪಾದಕರಾಗಿದ್ದಾಗ ಇಡೀ ಉದಯವಾಣಿಯನ್ನು ಮೂರ್ಖರವಾಣಿಯನ್ನಾಗಿ ಮಾಡಿದ್ದರು. ಈಗ ’ಕನ್ನಡಪ್ರಭ’ ಕೂಡ ಓದುಗರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ. ಇವತ್ತಿನ ’ಕನ್ನಡಪ್ರಭ’ದ ಮುಖಪಟ ವರಧಿ; ”ಬಿಬಿಎಂಪಿ ಫಲಿತಾಂಶ ಈಗ ಅತಂತ್ರ, ಮರು ಚುನಾವಣೆ? ಮತಯಂತ್ರ ಹಾನಿ,ದತ್ತಾಂಶ ನಾಶ?” ಎಂದು ಹೊಡೆದು ಮಲಗಿಸಿದೆ.

ಇವರೆಲ್ಲಾ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? ಇವರಿಗೆಲ್ಲಾ ಅದೇ ಕೆಲಸವಾಗಿರಬಹುದು. ಆದರೆ ವೀಕ್ಷಕರಿಗಲ್ಲ; ಓದುಗರಿಗಲ್ಲ. ಅವರ ಸಮಯ ಅಮೂಲ್ಯವಾದುದು. ಹಾಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಏಪ್ರಿಲ್ ಫೂಲ್ ಮಾಡಲು ಹೊರಟರೆ ಅವರ ಬಗ್ಗೆ ಮರುಕ ಹುಟ್ಟುತ್ತದೆ

ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?

ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು.
ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.

ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?

ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?

ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!

ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.

ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?

ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.
ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.
ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.

ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?

ರಾಷ್ಟ್ರಪತಿಗಳನ್ನು ಕೇವಲ ಮಹಿಳೆಯಾಗಿ ಕಂಡ ವಿ.ಕ.

ಇವತ್ತಿನ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಎರಡನೆಯ ಸಂಪಾದಕೀಯ ಹೀಗಿದೆ;
ಸುಖೋಯ್ ಶೋಕಿ!
” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”
ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!
ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”
ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.
ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.
ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.

ಕುಲಾಂತರಿ ಬೀಜ; ವಾಚಾಳಿಗಳಚರ್ಚೆ

ಬ್ಲಾಗ್ ಬರೆಯುವುದರಲ್ಲಿನ ಆಸಕ್ತಿ ಹೊರಟು ಹೋಗಿದೆ. ಅರೋಗ್ಯಕರ ಅಂತರದಲ್ಲಿ ನಿಂತು ನೋಡಿದರೂ ಅದರಲ್ಲಿ ಹುಳುಕನ್ನು ಹುಡುಕಿ ತೆಗೆಯುವವರೇ ಹೆಚ್ಚಾಗಿದ್ದಾರೆ. ಆದರೆ ಇವತ್ತು ಬರೆಯದೆ ಇರಲಾಗಲಿಲ್ಲ.

ಕುಲಾಂತರಿ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜೈವಿಕ ತಂತ್ರಜ್ನಾನ ನಿಯಂತ್ರಣ ಸಂಸ್ಥೆಯ ’ಜೆನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ’ ನಿನ್ನೆ ಒಪ್ಪಿಗೆ ನೀಡಿದೆ. ರೈತ ಸಂಘಟನೆಗಳು ಬಿಟಿ ಹತ್ತಿ, ಬಿಟಿ ಬದನೆ ಮುಂತಾದ ಕುಲಾಂತರಿ ತಳಿಗಳ ವಿರುದ್ದ ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದಿವೆ. ಪ್ರೋ. ನಂಜುಂಡಸ್ವಾಮಿಯವರಂತೂ ಮಾನ್ಸಂಟೋ ಕಂಪೆನಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು.

ಇಂದು ಕನ್ನಡದ ಎರಡು ಸುದ್ದಿಚಾನಲ್ ಗಳು ಬಿಟಿ ಬದನೆಯ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ನಡೆಸಿಕೊಟ್ಟವು. ಸಮಯೋಚಿತವದುದೇ. ಆದರೆ ನಿರೂಪಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿತ್ತು. ಎರಡೂ ಚಾನಲ್ ನಲ್ಲಿ ವಿಷಯದ ಪರ ಮತ್ತು ವಿರೋಧ ಕುರಿತು ಮಾತಾಡುವ ಇಬ್ಬರು ತಜ್ನರಿದ್ದರು. ಅವರಲ್ಲಿನ ಮಾಹಿತಿಯನ್ನು ಹೊರಗೆಳೆದು ವಿಚಾರ ಮಂಥನ ನಡೆಸುವಲ್ಲಿ ನಿರೂಪಕರು ವಿಪಲರಾಗಿ ಅವರ ದಡ್ಡತನವೇ ಎದ್ದು ಕಾಣುತ್ತಿತ್ತು.

ನಿರೂಪಕರಿಗೆ ವಿಷಯದ ಆಳ ಅರಿವು ಇರಬೇಕೆಂದಿಲ್ಲ. ಅಥಿತಿಗಳನ್ನು ಪರಸ್ಪರ ಚರ್ಚೆಗೆ ದೂಡಿಬಿಟ್ಟು, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು ತಾವು ಸಮನ್ವಯಕಾರರಾಗಿ ಹಳಿ ತಪ್ಪದಂತೆ ನೋಡಿಕೊಂಡರಾಯಿತು. ಅದಕ್ಕೆ ವಿಷಯದ ಪ್ರಾಥಮಿಕ ಜ್ನಾನವಿದ್ದರೂ ಸಾಕಾಗುತ್ತದೆ.

ಕುಲಾಂತರ‍ಿ ಬೀಜ ನಮ್ಮ ದೇಶಕ್ಕೆ ಬಂದರೆ ಏನಾಗುತ್ತೆ? ನಮ್ಮ ರೈತರಿಗೆ ಬೀಜದ ಮೇಲಿನ ಹಕ್ಕು ಹೊರಟು ಹೋಗುತ್ತೆ. ಪಿಳಿಗೆಯಿಂದ ಪಿಳಿಗೆಗೆ ಹರಿದು ಬಂದಿರುವ ಈ ಹಕ್ಕು ಕಳೆದುಹೋಗಿ ಬಹುರಾಷ್ಟ್ರೀಯ ಬೀಜ ಕಂಪಿನಿಗಳ ಮುಂದೆ ನಮ್ಮ ರೈತ ಬೀಜಕ್ಕಾಗಿ ಬೊಗಸೆಯೊಡ್ಡಿ ನಿಲ್ಲಬೇಕಾಗುತ್ತೆ. ನಮ್ಮ ಆಹಾರ ಸ್ವಾವಲಂಬನೆ ಹೊರಟು ಹೋಗುತ್ತೆ. ಅವರ ಬೀಜಕ್ಕೆ ಅವರು ಶಿಪಾರಸ್ಸು ಮಾಡಿದ ಗೊಬ್ಬರವನ್ನು ಹಾಕಬೇಕಾಗುತ್ತೆ.ನಮ್ಮ ತಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಮ್ಯತೆ.

ಎರಡನೆಯದಾಗಿ ಕುಲಾಂತರಿ ಬೀಜವೆಂಬುದು ನಿಸರ್ಗವಿರೋಧಿ. ಅದು ಜೀವ ಸಂಕುಲದ ಸಹಜ ಅರಳುವಿಕೆಯಲ್ಲ. ಒಂದು ಜೀವಿಯ ವಂಶವಾಹಿನಿಯನ್ನು ಇನ್ನೊಂದು ಜೀವಿಯ ವಂಶವಾಹಿನಿಯೊಳಗೆ ಬಲವಂತವಾಗಿ ತುರುಕುವುದು. ಪ್ರಾಣಿಗಳ ವಂಶವಾಹಿನಿಯನ್ನು ತರಕಾರಿಯ ವಂಶವಾಹಿನಿಯಯೊಳಗೆ ಸೇರಿಸಿ ಇನ್ನೊಂದನ್ನು ಸೃಷ್ಟಿಸುವುದು; ಇದು ಒರಿಜಿನಲ್ ಅಲ್ಲ. ಇದನ್ನು ಮನುಷ್ಯ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವೇ? ಈ ಪ್ರಾಥಮಿಕ ಜ್ನಾನವಿದ್ದರೂ ಸಾಕು ಕಾರ್ಯಕ್ರಮವನ್ನು ನಿಭಾಯಿಸಬಹುದು.

ಪ್ರಾಥಮಿಕ ಜ್ನಾನವೇ ಇಲ್ಲದೆ ನಿರೂಪಕರ ಸೀಟಲ್ಲಿ ಕುಳಿತರೆ ಹೇಗೆ? ರೈತಾಪಿ, ಹಳ್ಳಿಯಿಂದ ಮುಂತಾದ ಬ್ಲಾಗ್ ಲೋಕವನ್ನಾದರೂ ಒಮ್ಮೆ ಹೊಕ್ಕು ಬರಬಾರದೇ?!

ಬಿ.ಬಿ.ಸಿಗೊಂದು ಎಡಿಟೋರಿಯಲ್ ಗೈಡ್ ಲೈನ್ಸ್






ಟೀವಿ ಚಾನಲ್ ಗಳನ್ನು ಕೈ ಯಾಂತ್ರಿಕವಾಗಿ ಬದಲಾಯಿಸ್ತ ಇತ್ತು. ಸುದ್ದಿ ಚಾನಲ್ಲೊಂದರಲ್ಲಿ ’ಪಂಚರಂಗಿ ಪಾಂಚಾಲಿ’ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ’ಸಚ್ ಕ ಸಾಮ್ನ’ ಎಂಬ ರಿಯಾಲಿಟಿ ಶೋದಲ್ಲಿ ತನ್ನ ಅಂತರಂಗದ ಗುಟ್ಟುಗಳನ್ನು ಬಹಿರಂಗಪಡಿಸಿದ ದ್ರೌಪದಿ ಪಾತ್ರಧಾರಿಣಿಯಾಗಿದ್ದ ರೂಪಗಂಗೂಲಿ ಬಿಚ್ಚಿಟ್ಟ ಸತ್ಯಗಳನ್ನಾದರಿಸಿದ ಕಾರ್ಯಕ್ರಮವಿದು.

ಮಂಗಳವಾರ ಪ್ರಸಾರ ಕಂಡ ಈ ಕಾರ್ಯಕ್ರಮವನ್ನು ಉಪೇಕ್ಷಿಸಿ ಚಾನಲ್ ಬದಲಾಯಿಸಿದ್ದೆ. ಯಾಕೆಂದರೆ ಕಾರ್ಯಕ್ರಮ ಪುರುಷ ಪಕ್ಷಪಾತಿಯಾಗಿ ಮುಂದುವರಿಯುತ್ತಿತ್ತು. ಇಂದು ಅದು ನೆನಪಿಗೆ ಬಂತು; ಯಾಕೆಂದರೆ ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಂತೆ. ಅದು ಕೂಡ ಗೊತ್ತಾದದ್ದು ಈಟೀವಿ ನ್ಯೂಸ್ ನಿಂದ.

ಟೀವಿ ರಿಮೋಟ್ ವೀಕ್ಷಕರ ಕೈಯಲ್ಲಿರುತ್ತೆ. ಹಾಗಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುದ್ದಿ ಚಾನಲ್ ಗಳ ಲೈವ್ ಕವರೇಜ್ ಕೆಲವೊಮ್ಮೆ ಮನಸ್ಸನ್ನು ಘಾಸಿಗೊಳಿಸುತ್ತೆ. ಅದರಲ್ಲೂ ದುರ್ಮರಣಕ್ಕಿಡಾದವರ ಆಪ್ತರ ಮುಂದೆ ಸೌಂಡ್ ಬೈಟ್ ಗಾಗಿ ಮೈಕ್ ಹಿಡಿಯುವುದಿದೆಯಲ್ಲಾ ಅದು ತುಂಬಾ ಅಮಾನವೀಯ ಅನ್ನಿಸುತ್ತೆ. ಹಿಂಸೆಯಾಗುತ್ತೆ. ಸಾವನ್ನು, ಅತ್ಯಾಚಾರವನ್ನು ಮಾರ್ಕೇಟ್ ಮಾಡಿಕೊಳ್ಳುವುದು ಅನಾಗರೀಕತೆ ಎನಿಸಿಕೊಳ್ಳುವುದಿಲ್ಲವೇ?

ಸುದ್ದಿ ಚಾನಲ್ ಗಳ ಹಿರಿಯಣ್ಣನಂತಿರುವ ಬಿ.ಬಿ.ಸಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಅದು ತನ್ನ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ಕಳೆದ ಜುಲೈ ಇಂದ ಜಾರಿಗೆ ತಂದಿದೆ.
ಹೀಗೊಂದು ಅಲೋಚನೆ ಅದಕ್ಕೆ ಬರಲು ಕಾರಣವಾದ ಘಟನೆಯೇ ರಷ್ಯನ್ ಫೆಡರೇಷನ್ ನ ಬೆಸ್ಲಾನ್ ಶಾಲಾ ಮಕ್ಕಳ ದುರಂತ
೨೦೦೪ರ ಸೆ.೧ರಂದು ಚೆಚನ್ಯಾ ಬಂಡುಕೋರರು ಬೆಸ್ಲಾನ್ ಶಾಲೆಯ ೧೧೦೦ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸತತ ೫ ದಿನ ಅವರನ್ನು ಸ್ಕೂಲಿನ ಜಿಮ್ ನಲ್ಲಿ ಕೂಡಿ ಹಾಕಲಾಗಿತ್ತು. ಅನ್ನ ನೀರು, ಔಷಧಿ ಸರಬರಾಜಿಗೂ ಉಗ್ರಗಾಮಿಗಳು ಅವಕಾಶ ಕೊಡಲಿಲ್ಲ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ೩೪ ಉಗ್ರಗಾಮಿಗಳಿದ್ದರು. ಜಿಮ್ ನಲ್ಲಿ ಸೊಪೋಕೇಶನ್ ಉಂಟಾಗಿ ಆ ಪುಟ್ಟ ಮಕ್ಕಳು ಪ್ರಜ್ನಾಶೂನ್ಯರಾದರು. ಕ್ರಮೇಣ ಸಾಯತೊಡಗಿದರು. ರಷ್ಯನ್ ಸೈನ್ಯ ಬಂಡುಕೋರರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಹೊತ್ತಿಗೆ ೩೩೪ ಜನ ಸತ್ತಿದ್ದರು. ಅವರಲ್ಲಿ ೧೮೬ ಮಕ್ಕಳಾಗಿದ್ದರು.

ಮೇಲಿನ ಘಟನೆಯನ್ನು ಬಿ.ಬಿ.ಸಿ ಸೇರಿದಂತೆ ಎಲ್ಲಾ ಸುದ್ದಿ ಚಾನಲ್ ಗಳು ಲೈವ್ ಕವರೇಜ್ ನೀಡಿದ್ದವು. ಸತ್ತ ಮಕ್ಕಳನ್ನು ಉಗ್ರಗಾಮಿಗಳು ಶಾಲೆಯಿಂದ ಹೊರಕ್ಕೆ ಎಸೆಯುತ್ತಿದ್ದರು. ಅದನ್ನೆಲ್ಲಾ ನಾವು ಲೈವ್ ಕವರೇಜ್ ನಲ್ಲಿ ನೋಡಿದ್ದೇವೆ. ಸೆ.೧ ಬಾಸ್ಲೇನ್ ಶಾಲೆಯಲ್ಲಿ ’ಡೇ ಅಫ್ ನಾಲೆಡ್ಜ್’ ದಿನ. ಅಂದರೆ ನಮ್ಮ ಶಿಕ್ಷಕರ ದಿನಾಚರಣೆಗೆ ಹತ್ತಿರದ ದಿನದಂತೆ. ಮಕ್ಕಳೆಲ್ಲಾ ತಮ್ಮ ಫೋಷಕರ ಕೈ ಹಿಡಿದುಕೊಂಡು ಪ್ರೀತಿಯ ಟೀಚರ್ ಗೆ ಹೂವು, ಗಿಪ್ಟ್, ಬೆಲೂನ್ ಗಳನ್ನು ಕೊಡಲು ಶಾಲೆಯೊಳಗೆ ಹೋದವರು ಹೆಣವಾಗಿ ಹೊರಬೀಳುತ್ತಿದ್ದರು.

ಬಿ.ಬಿ.ಸಿ ಇದನ್ನು ಲೈವ್ ಕವರೇಜ್ ಮಾಡಿದ ನಂತರದಲ್ಲಿ ಬಹುಶಃ ಬಹಳಷ್ಟು ವಿಚಾರ ವಿಮರ್ಶೆ ನಡೆಸಿರಬೇಕು. ಹಾಗಾಗಿ ಅದು ಸೆನ್ಸಿಟಿವ್ ಲೈವ್ ನ್ಯೂಸ್ ಕವರೇಜ್ ಗೆ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ರೂಪಿಸಿತು. ಸುದ್ದಿಯಲ್ಲಿ ’ವೇಗಕ್ಕಿಂತಲೂ ನಿಖರತೆ ಮುಖ್ಯ’ ಎಂಬುದು ಬ್ರೇಕಿಂಗ್ ನ್ಯೂಸ್ ನ ಬದ್ದತೆ; ಸೆನ್ಸಿಟಿವ್ ನ್ಯೂಸ್ ಅನ್ನು ಪ್ರಸಾರ ಮಾಡುವಾಗ ವಿಳಂಬನೀತಿಯನ್ನು ಅನುಸರಿಸಬೇಕು. ಎಷ್ಟು ವಿಳಂಬಿಸಬೇಕು ಎಂಬುದನ್ನು ಸುದ್ದಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ಇದು ವೀಕ್ಷಕರ ಜೊತೆಗೆ ನಮ್ಮ ಒಪ್ಪಂದ. ಅವರು ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇವು ನಮ್ಮ ಸಂಪಾದಕೀಯದ ನೀತಿ ಮತ್ತು ಮೌಲ್ಯಗಳು’ ಎಂದು ಬಿ.ಬಿ.ಸಿಯ ಸಂಪಾದಕೀಯ ಪಾಲೀಸಿಯ ನಿಯಂತ್ರಕರಾದ ಸ್ಟೀಪನ್ ವೈಟಲ್ ಹೇಳುತ್ತಾರೆ.

ಸಂಸ್ಥೆಯ ಉದೋಗಿಯೊಬ್ಬರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅನ್ನಿಸಿದರೆ ಸಂಪಾದಕೀಯ ಪಾಲಿಸಿಯ ನಿಯಂತ್ರಕರೇ ಅದನ್ನು ಪರಿಸೀಲನೆಗೆ ಒಳಪಡಿಸುತ್ತಾರೆ. ಗೈಡ್ ಲೈನ್ಸ್ ೧೮ ವರ್ಷ ಕೆಳಗಿನ ವೀಕ್ಷಕರ ರಕ್ಶಣೆ, ಕ್ರೈಮ್, ಹಿಂಸೆ ಮತ್ತು ಅಪರಾಧ, ರಿಲೀಜಿಯನ್, ಪ್ರೈವಸಿ ಮತ್ತು ನಿಷ್ಪಕ್ಷಪಾತದ ಮೇಲೆ ಲಕ್ಷ್ಯವನ್ನು ಇಟ್ಟಿದೆ.

ಕ್ರೈಮ್ ಮತ್ತು ಸಮಾಜಘಾತುಕ ನಡವಳಿಕೆಗಳಿಗೆ ಸಂಬಂಧಿಸಿದ ವರಧಿಗಳು ಪ್ರಸಾರವಾಗಬೇಕಾದರೆ ಗೈಡ್ ಲೈನ್ಸ್ ಮುಖ್ಯಸ್ಥರ ಪರಿಶೀಲನೆಗೆ ಒಳಪಡಲೇ ಬೇಕು.

ನಮ್ಮಲ್ಲಿಯೂ ಇಂತಹದೊಂದು ಗೈಡ್ ಲೈನ್ಸ್ ಬೇಕು ಅನ್ನಿಸುತ್ತದೆಯಲ್ಲವೇ?