ದೃಶ್ಯ ಮಾಧ್ಯಮವೆಂಬ ’ಅಗ್ನಿಗೋಳ’
Posted by
Nishada Kanjari
on Monday, July 27, 2009
/
Comments: (0)
ಪತ್ರಿಕೋದ್ಯಮ ಎಂಬುದು ಅದರ ಹೆಸರಲ್ಲೇ ಅಡಗಿರುವಂತೆ ಅದೊಂದು ಉಧ್ಯಮ. ಉಧ್ಯಮ ಅಂದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಇದ್ದದ್ದೇ. ಹಿಂದೆಲ್ಲಾ ಅದು ಎದ್ದು ಕಾಣುತ್ತಿರಲಿಲ್ಲ. ಅದನ್ನು ಸೇವಾಕ್ಶೇತ್ರವೇಂದೇ ಪರಿಗಣಿಸಲಾಗುತ್ತಿತ್ತು. ಅದು ನಿಜವೂ ಆಗಿತ್ತು. ಸಮಾಜದ ಬಗ್ಗೆ, ಸಾಮಾಜಿಕ ಬದಲಾವಣೆಯ ಬಗ್ಗೆ ಕನಸಿದ್ದವರು, ತುಡಿತವಿದ್ದವರು ಪತ್ರಕರ್ತರಾಗುತ್ತಿದ್ದರು. ಹಾಗಾಗಿ ಸಂಬಳ ನಗಣ್ಯವಾಗುತ್ತಿತ್ತು. ಬದುಕು ಹೇಗೋ ಸಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿವೆ. ಪತ್ರಿಕೋಧ್ಯಮಕ್ಕೆ ಗ್ಲಾಮರ್ ಬಂದಿದೆ. ಈಗದು ಥಳುಕು ಬಳುಕಿನ ಲೋಕ. ಅಸ್ಖಲಿತವಾದ ಮಾತು, ವಯ್ಯಾರದ ನಡೆನುಡಿ, ಆಕರ್ಷಕ ವ್ಯಕ್ತಿತ್ವ, ಹದಿನೆಂಟರಿಂದ ೨೪ರೊಳಗಿನ ವಯೋಮಿತಿಯಿದ್ದರೆ ಯಾರು ಬೇಕಾದರೂ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಲು ಪ್ರಯತ್ನಿಸಬಹುದು; ತಲೆಯಲ್ಲಿ ಮಿದುಳಿಲ್ಲದಿದ್ದರೂ...! ಮುದ್ರಣ ಮಾಧ್ಯಮಕ್ಕೆ ಇಷ್ಟು ಸುಲಭದಲ್ಲಿ ಪ್ರವೇಶ ಸಾಧ್ಯವಿಲ್ಲ. ಅಲ್ಲಿ ಸಾಹಿತ್ಯ, ಕಲೆ, ಸಾಮಾನ್ಯ ಜ್ನಾನದ ಅರಿವಿನ ಜೊತೆ ಭಾಷೆಯ ಬಗ್ಗೆ ಹಿಡಿತವಿರಬೇಕು.
ಈಗಂತೂ ಪತ್ರಿಕೋಧ್ಯಮ ಸೇವಾಕ್ಶೇತ್ರವಲ್ಲ. ಹಾಗಾಗಿ ಸಾಪ್ಟ್ ವೇರ್ ಕ್ಶೇತ್ರದಲ್ಲಿ ಸಿಗುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಜಾಸ್ತಿ ಸಂಬಳ ಸಿಗುತ್ತದೆ. ಸಿಗದವರು ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಗಿಂಬಳಕ್ಕಾಗಿ ಕೈಚಾಚುತ್ತಾರೆ. ರಾಜಕಾರಣಿಗಳ ಗುಟ್ಟು ಕಾಪಾಡುತ್ತಾರೆ; ಉಧ್ಯಮಿಗಳ ಹಿತ ಕಾಯುತ್ತಾರೆ. ಅಂತಹ ಪತ್ರಕರ್ತನೊಬ್ಬನ ಬಗ್ಗೆ ’ಅಗ್ನಿ’ ವಾರಪತ್ರಿಕೆ ಈ ವಾರ ಕವರ್ ಸ್ಟೋರಿ ಮಾಡಿದೆ.
’ಟಿವಿ೯ನಲ್ಲಿ ಕ್ರಿಮಿ ರೋಲ್ ಕಾಲ್ ರಾಘವೇಂದ್ರ’ ಎಂಬುದು ಅದರ ಹೆಡ್ಡಿಂಗ್. ಮಂಜುನಾಥ ಅದ್ದೆ ಬರೆದಿರುವ ಈ ಲೇಖನ ಸಮತೂಕವುಳ್ಳವಾದ ವರದಿಯಾಗಿದ್ದರೂ ’ಅಗ್ನಿ’ ಸಮತೂಕವುಳ್ಳ ಪತ್ರಿಕೆಯೇನಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅಥವಾ ಅವಕಾಶ ಕಲ್ಪಿಸಿಕೊಂಡು ಬ್ರಾಹ್ಮಣರನ್ನು ಬಯ್ಯುವುದನ್ನು, ಶೂದ್ರರನ್ನು ಹೊಗಳುವುದನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ.
’ಅಗ್ನಿ’ಯ ಝಳಕ್ಕೆ ಸಿಕ್ಕ ರಾಘವೇಂದ್ರನ ಶಿಷ್ಯರಲ್ಲಿ ಕೆಲವರು ಸುವರ್ಣನ್ಯೂಸ್ ಚಾನಲ್ ನತ್ತ ಇಣುಕಿ ನೋಡುತ್ತಿದ್ದಾರೆಂದು ನಿಷಾದಕ್ಕೆ ವರದಿಯಾಗಿದೆ. ಸುವರ್ಣದಲ್ಲಿ ಒಂದಷ್ಟು ಜನಕ್ಕೆ ಗೇಟ್ ಪಾಸ್ ನೀಡಲಾಗಿದೆ. ಇತ್ತೀಚೆಗೆ ಅಲ್ಲಿಂದ ಹೊರಬಂದವರಲ್ಲಿ ಚಾಮರಾಜ ಸವಡಿ ಒಬ್ಬರು. ಸಂವೇದನಾಶೀಲ ಬರಹಗಾರರಲ್ಲಿ ಒಬ್ಬರಾದ ಸವಡಿ ಪ್ರಿಂಟ್ ಮೀಡಿಯಾದಲ್ಲಿ ಪಳಗಿದವರು. ಜನಪರ ಕಾಳಜಿಯುಳ್ಳ ಯುವ ಬರಹಗಾರ. ಸಮಾಜವಾದಿ ಚಿಂತನೆಯ ಝಳಕ್ ಅವರ ಬರಹಗಳಲ್ಲಿದೆ. ಒಂಚೂರು ಸಹನೆ, ವಿವೇಚನೆ ಇರುತ್ತಿದ್ದರೆ ಅವರು ಪ್ರಜಾವಾಣಿಯನ್ನು ಬಿಡುವ ಪ್ರಮೇಯವೇ ಬರುತ್ತಿರಲಿಲ್ಲ.
ಪ್ರಿಂಟ್ ಮೀಡಿಯಾದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಹೋಗುವವರ ಬಗ್ಗೆ ನನಗೆ ಅನುಕಂಪವಿದೆ. ಅದು ದೂರದ ಬೆಟ್ಟ. ಘಂಟೆಗಳ ಪರಿವೆಯಿಲ್ಲದೆ ಅಲ್ಲಿ ಕೆಲಸ ಮಾಡಬೇಕಾಗುತ್ತದೆ. ಸದಾ ಸ್ಪರ್ಧೆ. ಟಿಅರ್ ಪಿ ಮೇಲೆಯೇ ಕಣ್ಣು. ಮೊದಲು ಸುದ್ದಿ ಕೊಡುವ ಆತುರ. ಒತ್ತಡದ ಬದುಕು. ಕೆಲಸಕ್ಕೆ ಸೇರುವಾಗ ಕಳೆಕಳೆಯಾಗಿರುತ್ತಿದ್ದ ಹುಡುಗ-ಹುಡುಗಿಯರು ಬರಬರುತ್ತಾ ಪೇಲವರಾಗುತ್ತಾರೆ. ಕಸ್ತೂರಿ ಚಾನಲ್ಲಿನಲ್ಲಿ ಒಬ್ಬ ಹುಡುಗನಿದ್ದಾನೆ. ಹೆಸರು ನೆನಪಾಗುತ್ತಿಲ್ಲ. ನ್ಯೂಸ್ ರೀಡರ್. ಆತ ಹೊಸದಾಗಿ ಬಂದಾಗ ಅರಳುಗಣ್ಣುಗಳ ಮುಗ್ಧ ಸುಂದರಾಂಗ. ಈಗ ಮಂಗೋಲಿಯನ್ ಕಣ್ಣುಗಳ ಹ್ಯಾಪ್ ಮೋರೆಯ ಮಂಕಣ್ಣ.
ಮೊನ್ನೆ ಯಾರತ್ರನೋ ಮಾತಾಡ್ತಿದ್ದೆ. ಅವರೊಂದು ಸಂಗತಿ ಹೇಳಿದರು. ಸುದ್ದಿ ಚಾನಲ್ಲಿನಲ್ಲಿ ಹುಡುಗಿಯರು ಮನಸ್ಸಿಗೆ ಬಂದ ಟೈಮ್ ನಲ್ಲಿ ಗರ್ಭಿಣಿಯರಾಗಬಾರದಂತೆ. ಪರಸ್ಪರ ಮಾತಾಡಿಕೊಂಡು ಸರದಿ ಪ್ರಕಾರ ಬಸುರಿಯಾಗಬೇಕಂತೆ. ಹಾಗಂತ ಆಡಳಿತ ಮಂಡಳಿಯವರು ಕಿವಿ ಮಾತು ಹೇಳಿದ್ದಾರಂತೆ. ವೈಯಕ್ತಿಕ ಬದುಕು ಎಲ್ಲಿಗೆ ಬಂದು ನಿಂತಿದೆ ನೋಡಿ!
ಪ್ರಜಾವಾಣಿಯಂತ ಪತ್ರಿಕೆಯಿಂದ ವಲಸೆ ಹೋಗುವಾಗ ಎಚ್ಚರದಿಂದಿರಬೇಕು. ಕನ್ನಡ ಪತ್ರಿಕೋಧ್ಯಮಕ್ಕೆ ಅದು ಕೊನೆಯ ನಿಲ್ದಾಣ. ಅದೊಂಥರ ಸರಕಾರಿ ಆಪೀಸ್ ಇದ್ದ ಹಾಗೆ.ಅಲ್ಲಿ ಸೇರಿಕೊಳ್ಳುವುದು ಸ್ವಲ್ಪ ಕಷ್ಟ. ಒಮ್ಮೆ ಸೇರಿಕೊಂಡ ಮೇಲೆ ನಿವೃತ್ತಿಯವರೆಗೆ ಅಲ್ಲಿ ಕೆಲಸ ಮಾಡಬಹುದು. ಬರೆಯಲು ಬಾರದಿದ್ದರೂ ಕೆಲಸದಿಂದ ತೆಗೆದು ಹಾಕುವುದಿಲ್ಲ. ಹೆಚ್ಚೆಂದರೆ ಪ್ರಮೋಷನ್ ಕೊಡದಿರಬಹುದು. ಕೈ ತುಂಬಾ ಸಂಬಳ, ನಿಗದಿತ ಅವಧಿಯ ಕೆಲಸ, ಬೇಕೆನಿಸಿದಾಗ ರಜಾ ಸೌಲಬ್ಯ, ಕ್ಯಾಂಟಿನ್ ನಲ್ಲಿ ಪುಷ್ಕಳವಾದ ಧರ್ಮದ ಊಟ. ಆದರೂ ಜನ ದೃಶ್ಯ ಮಾಧ್ಯಮವೆಂಬ ಅಗ್ನಿಗೋಳಕ್ಕೆ ಮುತ್ತಿಕ್ಕಲು ಜನ ಬಯಸುತ್ತಾರೆ.
”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” -ಅಡಿಗ
ಮೀಡಿಯಾ ಮಿರ್ಚಿ-ಬ್ಯಾಡ್ಗಿಯೋ ಗುಂಟೂರೋ....
Posted by
Nishada Kanjari
on Sunday, July 19, 2009
/
Comments: (0)
ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕೆಲಸ ಮಾಡಿರುವ ಜಿ ಎನ್ ಮೋಹನ ವಿಜಯಕರ್ನಾಟಕದಲ್ಲಿ ಇನ್ನು ಮುಂದೆ ಪ್ರತಿ ಶನಿವಾರ ’ಮೀಡಿಯಾ ಮಿರ್ಚಿ’ ಅಂಕಣ ಬರೆಯುತ್ತಾರೆ. ಒಳ್ಳೆಯ ಅಲೋಚನೆ.
ಎಲ್ಲಾ ಆರಂಭಗಳೂ, ಮೊದಲ ಹೆಜ್ಜೆಗಳೂ ಒಳ್ಳೆಯ ಉದ್ದೇಶಗಳನ್ನೇ ಹೊಂದಿರುತ್ತವೆ. ಆದರೆ ಅವು ಕಾರ್ಯರೂಪಕ್ಕೆ ಬಂದಾಗ, ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಸಾಧ್ಯತೆಗಳೂ ಇರುತ್ತವೆ.
ವಿಜಯಕರ್ನಾಟಕದಂತಹ ಪತ್ರಿಕೆಯಲ್ಲಿ ಏನು ಬಂದರೂ ಅದನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಆ ಹಿನ್ನೆಲೆ ಅದಕ್ಕಿದೆ. ಹಾಗೆ ನೋಡಿದರೆ ’ಸಂಶಯ’ವೇ ಒಬ್ಬ ಪತ್ರಕರ್ತನ ಸಹಜ ಗುಣಧರ್ಮವಾಗಬೇಕು. ಸಂಶಯಪಡುತ್ತಲೇ ಒಂದು ನಿರ್ಧಿಷ್ಟ ಅಭಿಪ್ರಾಯದೆಡೆಗೆ ಓದುಗ ಸಾಗುತ್ತಿರಬೇಕು. ಆದರೆ ಒಂದೇ ಫೆಪರನ್ನು ತರಿಸುವ ಕೆಳ ಮಧ್ಯಮವರ್ಗದವರು ಅದರಲ್ಲಿ ಬಂದದ್ದೆಲ್ಲವನ್ನು ನಿಜವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆ ಒಂದೇ ಪೇಪರು ತರಿಸಿಕೊಳ್ಳುವ ಬಹುಸಂಖ್ಯಾತರು ವಿಜಯಕರ್ನಾಟಕದ ಓದುಗರು ಎಂಬುದು ಕೂಡ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಹತ್ತಾರು ಪತ್ರಿಕೆಗಳನ್ನು ಓದುವ-ತಿರುವಿ ಹಾಕುವ ಸಾಮರ್ಥ್ಯವುಳ್ಳ ರಾಜಕಾರಣಿಗಳು ಅಲ್ಪಸಂಖ್ಯಾತರು. ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಹಾಗಾಗಿ ಈಗ ಹೊಸದಾಗಿ ಆರಂಭವಾಗಿರುವ ಮೀಡಿಯಾಮಿರ್ಚಿ ಬಹುಸಂಖ್ಯಾತರ ಮೇಲೆ ಪ್ರಭಾವ ಬೀರಬಲ್ಲ ಅಂಕಣ. ಅದಕ್ಕೆ ಜಿ.ಎನ್.ಮೋಹನ್ ಬಗ್ಗೆ ಅಷ್ಟೊಂದು ಟೀಕೆ-ಟಿಪ್ಪಣಿಗಳು ನಡೆಯುತ್ತಿವೆ.
ಮೋಹನ್ ಎಡಪಂಥಿಯ ವಿಚಾರಧಾರೆಯ ಬಗ್ಗೆ ಒಲವುಳ್ಳವರು. ಇತ್ತೀಚೆಗೆ ವೈಯಕ್ತಿಕವಾಗಿ ಅನುಕೂಲಸಿಂಧು ವರ್ತಮಾನಕ್ಕೆ ಒಗ್ಗಿಕೊಂಡಂತೆ ಭಾಸವಾಗುತ್ತಿರುವವರು. ಹಾಗಾಗಿ ವಿಜಯಕರ್ನಾಟ್ಕದ ಜೊತೆ ಬ್ಲೆಂಡ್ ಆಗಬಹುದು. ಮಿರ್ಚಿಮಸಾಲೆಗೆ ಹಾಕಿದ ಮೆಣಸು ಗುಂಟೂರಿನದೋ ಬ್ಯಾಡ್ಗಿಯದೋ ಘಾಟಿನ ಮೇಲೆ ನಿರ್ಧಾರವಾಗುತ್ತದೆ.
ಮೋಹನ್ ನಿಷ್ಪಕ್ಷಪಾತಿಯಾಗಿದ್ದರೆ ಮೊದಲು ಚಾಟಿ ಬೀಸಬೇಕಾದ್ದೇ ವಿಜಯಕರ್ನಾಟಕದ ಮೇಲೆ. ಅದು ಸಾಧ್ಯವಾಗಬಹುದೇ?
ಮೀಡಿಯಾದಲ್ಲಿ ಕೆಲಸ ಮಾಡುವವರೆಲ್ಲಾ ಕೂಲಿಯಾಳುಗಳು. ಅವರಿಗೊಬ್ಬ ಮೇಸ್ತ್ರಿ ಇರುತ್ತಾನೆನ್ನಿ. ಅವನಿಗೆ ಒಂದಷ್ಟು ಅಧಿಕಾರವೂ ಇರುತ್ತದೆ. ಆದರೆ ಪರಮಾಧಿಕಾರ ಯಜಮಾನನ ಕೈಯಲ್ಲಿರುತ್ತದೆ. ಆತನಿಗೆ ಕೂಲಿಯಾಳುಗಳ ಸಮಸ್ಯೆಯ ಅರಿವಿರುವುದಿಲ್ಲ. ಅವನೊಬ್ಬ ಬ್ಯುಸಿನೆಸ್ ಮೆನ್ ಅಷ್ಟೇ. ಅವನು ಮಿದುಳಿನಿಂದ ಯೋಚಿಸುತ್ತಾನೆ; ಹೃದಯದಿಂದಲ್ಲ.
ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ ಮಾಡುತ್ತೇನೆ ಎಂದು ಮೋಹನ್ ಹೇಳಿದ್ದಾರೆ. ನೋಡೋಣ; ಅವರು ಕಲಿತ ಪಾಠಗಳಿಗೆ ವಿಜಯಕರ್ನಾಟಕ ಇನ್ನೊಂದು ಅಧ್ಯಾಯ ಸೇರಿಸುತ್ತಾ.....?
ಪತ್ರಿಕೋಧ್ಯಮದ ಚಿತ್ತ ಎತ್ತ?
Posted by
Nishada Kanjari
on Thursday, July 16, 2009
/
Comments: (0)
ಮೊನ್ನೆ ಕಸ್ತೂರಿ ಚಾನಲ್ ನಲ್ಲಿ ನ್ಯೂಸ್ ನೋಡ್ತಾ ಕೂತಿದ್ದೆ. ಮೊದಲ ಹೆಡ್ ಲೈನ್ ಸುದ್ದಿ ’ಹೈಕೋರ್ಟ್ ಗೆ ಮೋಹಿನಿ ಕಾಟ’. ಈಸುದ್ದಿಯನ್ನು ಯಾವುದೋ ಪೇಪರಿನಲ್ಲಿ ನೋಡಿದ ನೆನಪು. ಒಂದು ಸೆಟೈರ್ ಬರಹಕ್ಕೆ ವಸ್ತುವಾಗಬೇಕಿದ್ದ ಈ ವದಂತಿ ದೃಶ್ಯಮಾಧ್ಯಮದಲ್ಲಿ ಪ್ರೈಮ್ ಟೈಮ್ ನಲ್ಲಿ ಸುದ್ದಿಯಾಗಬೇಕಿದ್ದರೆ...ಅದರ ಹಿಂದೆ ಕೆಲಸ ಮಾಡಿದ್ದ ವರದಿಗಾರ/ರ್ತಿ, ಇನ್ಪುಟ್ ಎಡಿಟರ್,ಔಟ್ಪುಟ್ ಎಡಿಟರ್ ಗಳ ತಲೆಯಲ್ಲಿ ಮೋಹಿನಿ ನಾಟ್ಯವಾಡುತ್ತಿದ್ದಳೆ? ಸಂಶಯ ಪಡಬೇಕಾದ ವಿಷಯ.
ಆ ಸುದ್ದಿ ನೋಡುತ್ತಿರುವಾಗ ನನ್ನ ಪಕ್ಕದಲ್ಲಿ ಹಿರಿಯ ಪತ್ರಕರ್ತರೊಬ್ಬರಿದ್ದರು.’ಏನ್ ಸರ್, ಪತ್ರಿಕೋಧ್ಯಮ ಹೀಗಾಗಿ ಹೋಯ್ತು’ ಅಂದೆ.
’ಎಲ್ಲಾ ಟಿಅರ್ ಪಿ ಮಹಿಮೆ’ ಅಂದರು. ’ಹಾಗಾದರೆ ಅದೆಲ್ಲೋ ನ್ಯೂಸ್ ಓದ್ತಾ ಓದ್ತಾ ಬಟ್ಟೆ ಕಳ್ಚ್ತಾ ಬೆತ್ತಲೆ ಆಗ್ತಾರಂತೆ. ಅದು ಇಲ್ಲಿಯೂ ಬರ್ಬಹುದಾ? ಅಂದೆ. ’ಖಂಡಿತಾ’ ಎಂದರವರು.
ಕುತೂಹಲಕ್ಕೆ ಮೋಹಿನಿಕಾಟದ ಪೇಪರು ಹುಡುಕಿದೆ. ಅದು ಬಿಜೆಪಿಯ ಪಂಚಾಂಗ ’ವಿಜಯ ಕರ್ನಾಟಕ’!. ’ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ. ಅಮಾವಾಸ್ಯೆಯ ರಾತ್ರಿ ತಂಗಾಳಿಯಲ್ಲಿ ತೇಲುವ ಚೆಲುವೆ, ದೆವ್ವದ ಕಾಟಕ್ಕೀಡಾದ ಹೈಕೋರ್ಟ್?’ ಇಷ್ಟುದ್ದದ ಹೆಡ್ಡಿಂಗಿನ ಅರ್ದ ಪುಟಕ್ಕೆ ಹತ್ತಿರದ ಈ ಇನ್ವೆಸ್ಟಿಗೇಟಿವ್ ಸ್ಟೋರಿ ಬರೆದ ವರದಿಗಾರ ಯಾರಪ್ಪಾಂತ ನೋಡಿದರೆ,ಅದು ಧ್ಯಾನ್ ಪೂಣಚ್ಚ.
ಹೀಗೂ ಊಂಟೆ? ಸ್ಟೈಲಿನಲ್ಲಿ ಕತೆ ಹಣೆದದ್ದೇ ಹಣೆದದ್ದು. ಈತ ಹಿಂದೆ ಮುತ್ತಪ್ಪ ರೈ ನೇತೃತ್ವದ’ಗರ್ವ’ ಟಾಬ್ಲೈಡ್ ನಲ್ಲಿ ಕೆಲಸ ಮಾಡುತ್ತಿದ್ದ. ಆ ಪತ್ರಿಕೆ ಮುಚ್ಚಲು ಆತನೇ ನೆಪವಾಗಿದ್ದ. ಅದು ಹೇಗಂದರೆ; ಸುವರ್ಣ ಚಾನಲ್ ನ ಬಗ್ಗೆ ಆತ ಕವರ್ ಸ್ಟೋರಿ ಮಾಡಿದ್ದ. ಇದು ಅಲ್ಲಿನ ಸಿಬ್ಬಂದಿಯಲ್ಲಿ ಹಲವರ ಮನಸ್ಸನ್ನು ಘಾಸಿಗುಳಿಸಿತ್ತು. ಉನ್ನತ ಹುದ್ದೆಯಲ್ಲಿದ್ದ ಒಂದು ಹುಡುಗಿಯಂತು ಅವಮಾನ ಸಹಿಸಲಾರದೆ ಕೆಲಸ ಬಿಟ್ಟು ಹೋದಳು. ಇನ್ನೊಬ್ಬರು ಮುತ್ತಪ್ಪರೈಯವರ ಆಪ್ತರ ಮುಂದೆ ನೋವು ತೋಡಿಕೊಂಡರು. ಅದರ ಸರ್ಕ್ಯೂಲೇಶನ್ ಅಷ್ಟರಲ್ಲೇ ಇದೆ, ಎಂದುಕೊಂಡರೈ ಪತ್ರಿಕೆ ಮುಚ್ಚಲು ಆದೇಶ ನೀಡಿದರು.
ಅಂತಪ್ಪಾ ಧ್ಯಾನ್ ಪೂಣಚ್ಚನಿಂದ ಆರಂಭಗೊಂಡ ಮೋಹಿನಿ ಕಾಟ ವಿಜಯ ಕರ್ನಾಟಕವನ್ನು ಕಾಡಿ, ಕಸ್ತೂರಿಗೆ ಬಡಿದು, ಮುಂದೆ ನಿಗೂಢ ಜಗತ್ತನ್ನು ವ್ಯಾಪಿಸಿ,ಕರ್ನಾಟಕದ ಜನತೆ ’ಹೀಗೂ ಉಂಟೇ’ ಎಂದು ಮೂಗಿನ ಮೇಲೆ ಬೆರಳಿಡಬಹುದು.