ಮೊನ್ನೆ ಯಾರೋ ಹೇಳುತ್ತಿದ್ದರು; ಈಗ ಜರ್ನಲಿಸ್ಟ್ ಗಳು ಪರಸ್ಪರ ಎದುರಾದಾಗ ಕೇಳಿಕೊಳ್ಳುವ ಮೊದಲ ಪ್ರಶ್ನೆ ಎಂದರೆ ’ನನ್ನ ಬ್ಲಾಗ್ ನೋಡಿದ್ಯಾ?’ ಅಂದರೆ ಇಂದಿನ ಪತ್ರಕರ್ತರ ಆದ್ಯತೆಗಳಲ್ಲಿ ಬ್ಲಾಗ್ ನಡೆಸುವುದೂ ಒಂದು.
ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.
ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?
ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.
ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.
ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?
ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.
ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.
ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.
ಬಿಯಾಂಡ್ ದಿ ನ್ಯೂಸ್ -ಇಂದಿನ ಅಗತ್ಯ
Posted by
Nishada Kanjari
on Tuesday, August 25, 2009
/
Comments: (1)
ಶಶಿಧರ್ ಭಟ್ v/s ರಂಗನಾಥ ಸಂಕೇತಿ
Posted by
Nishada Kanjari
on Thursday, August 13, 2009
/
Comments: (0)

ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಪ್ರಭದ ಎಚ್. ಆರ್ ರಂಗನಾಥ್ ನೇಮಕಗೊಂಡಿದ್ದಾರೆ. ಇದುವರೆಗೆ ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದ ಶಶಿಧರ್ ಭಟ್ ಗೆ ಪ್ರಮೋಶನ್ ನೀಡಿ ಜ್ಯುಪಿಟರಿಗೆ ಕರೆಸಿಕೊಳ್ಳಲಾಗಿದೆ. ಜ್ಯುಪಿಟರ್, ಸುವರ್ಣ ನ್ಯೂಸ್ ಚಾನಲ್ ನ ಮಾಲಕರಾದ ಸಂಸದ ರಾಜೀವ್ ಚಂದ್ರಶೇಖರವರ ಬ್ಯುಸಿನೆಸ್ ಜಾಲದ ಕೇಂದ್ರ ಆಡಳಿತ ಸಂಸ್ಥೆ. ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಆರಂಭವಾಗಲಿರುವ ಕನ್ನಡ ದಿನ ಪತ್ರಿಕೆಯ ಜವಾಬ್ದಾರಿ ಭಟ್ಟರದೇ.
ಸುವರ್ಣ ಚಾನಲ್ ಆರಂಭವಾಗಿ ಎರಡೂವರೆ ವರ್ಷಗಳಷ್ಟೇ ಉರುಳಿವೆ. ಬಹುಶಃ ನ್ಯೂಸ್ ಚಾನಲ್ ಗೆ ಒಂದು ವರ್ಷ. ಯಾವಾಗಲೂ ಒಂದು ಸಂಸ್ಥೆಯನ್ನು ಕಟ್ಟುವುದು ಕಷ್ಟದ ಕೆಲಸ. ಅದು ಬಟ್ಟ ಬಯಲಲ್ಲಿ ದಿಕ್ಕು ಕಾಣದೆ ನಿಂತಂತೆ. ಒಳ್ಳೆಯ ಪೌಂಡೇಶನ್ ಹಾಕಿ ಕಟ್ಟಡ ನಿರ್ಮಿಸಿದಂತೆ. ಕಟ್ಟಿದ ಮೇಲೆ ಅದಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಯಾರು ಬೇಕಾದರು ಮಾಡಬಹುದು. ಮಹಡಿ ಕೂಡ ಕಟ್ಟಬಹುದು. ಈಗ ಸುಣ್ಣ ಬಣ್ಣ ಬಳಿಯುವ, ಮಹಡಿ ಕಟ್ಟುವ ಕೆಲಸಕ್ಕೆ ರಂಗನಾಥ್ ಬರುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬ್ಲಾಗ್ ಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ವಿಮರ್ಶಕಿ ಮೊದಲು ಬರೆದಳು. ನಂತರ ಸುದ್ದಿಮಾತು ಬರೆಯಿತು. ಸ್ವತಃ ಭಟ್ಟರೇ ತಮ್ಮ ಬ್ಲಾಗ್ ’ಕುಮ್ರಿ’ಯಲ್ಲಿ ಬರೆದುಕೊಂಡರು. ನಾನು ನನ್ನ ಪರಿಚಯದಲ್ಲೇ ಹೇಳಿಕೊಂಡಂತೆ ಅಲೆಮಾರಿ. ಎಲ್ಲೋ ತಿರುಗಾಡಲು ಹೋಗಿದ್ದೆ. ಬಂದೊಡನೆ ಇದನ್ನು ಬರೆಯಲಾರಂಭಿಸಿದೆ.ಉಳಿದ ಬ್ಲಾಗ್ ಗಳಲ್ಲಿ ಪ್ರಸ್ತಾಪವಾದ ಸಂಗತಿಗಳನ್ನು ನಾನು ಮತ್ತೆ ಪ್ರಸ್ತಾಪಿಸುವುದಿಲ್ಲ.
ನನಗೆ ತಿಳಿದು ಬಂದಂತೆ ರಂಗನಾಥ ಮತ್ತು ಶಶಿಧರ ಭಟ್ಟರ ಪರಿಚಯಕ್ಕೆ ಕಾಲು ಶತಮಾನದ ಇತಿಹಾಸವಿದೆ.ಅದು ಗೆಳೆತನವೂ ಆಗಿರಬಹುದು ಅಥವಾ ವೃತ್ತಿ ಬಂಧವೂ ಆಗಿರಬಹುದು. ಕೌಟುಂಬಿಕ ಸೇಹವೂ ಆಗಿರಬಹುದು. ಹೀಗೆ ಸಂಶಯ ಪಡಲು ಕಾರಣವಿದೆ. ಬ್ಯಾಚುಲರ್ ಬದುಕಿನಲ್ಲಿ ಶಶಿಧರ್ ಮತ್ತು ರಂಗನಾಥ್ ಒಂದೇ ಮನೆಯಲ್ಲಿದ್ದರು. ಭಟ್ಟರು ಮದುವೆಯಾದ ಮೇಲೂ ರಂಗನಾಥ ಅದೇ ಮನೆಯಲ್ಲಿ ಸ್ವಲ್ಪ ಕಾಲ ಇದ್ದರು.
ಶಶಿಧರ್ ಭಟ್ ಕೆಲಸ ಮಾಡುತ್ತಿದ್ದ ಕನ್ನಡ ಪ್ರಭಕ್ಕೆ ರಂಗನಾಥ್ ಕ್ರೈಮ್ ರಿಪೋರ್ಟರ್ ಆಗಿ ಸೇರಿಕೊಂಡವರು. ಕ್ರಮೇಣ ಮ್ಯಾನೇಜ್ ಮೆಂಟಿಗೆ ಹತ್ತಿರವಾಗತೊಡಗಿದರು. ಶಶಿಧರ್ ಭಟ್ಟರ ಮುಖ್ಯವರದಿಗಾರನ ಹುದ್ದೆ ಮೇಲೆ ರಂಗನಾಥ್ ಕಣ್ಣು ಬಿತ್ತು. ಭಟ್ಟರು ಏನು ಮಾಡುವುದೆಂದು ತೋಚದೆ ಒದ್ದಾಡುತ್ತಿರುವಾಗ ಅವರಿಗೆ ಎಷ್ಯಾನೆಟ್ ಚಾನಲ್ ನಿಂದ ಕರೆ ಬಂತು. ’ಕಾವೇರಿ’ ಚಾನಲ್ ಭಟ್ಟರು ಕಟ್ಟಿದರು. ಅದು ಬಾಗಿಲು ಮುಚ್ಚಿದ ಮೇಲೆ ಸ್ವಂತ ಪ್ರೋಡಕ್ಷನ್ ಹೌಸ್ ಆರಂಭಿಸಿದರು. ಕಾವೇರಿಯನ್ನು ಕಟ್ಟಿಕೊಂಡು ಭಟ್ಟರು ಒಬ್ಬರೇ ಹೆಣಗಾಡಿದ್ದನ್ನು ಮರೆಯದ ಏಷ್ಯಾನೆಟ್ ಆಡಳಿತ ಮಂಡಳಿ ಮತ್ತೆ ಅವರನ್ನು ಸುವರ್ಣಕ್ಕೆ ಕರೆಸಿಕೊಂಡಿತು. ಸುವರ್ಣ ಉಳಿದ ಚಾನಲ್ ಗಳ ಜೋತೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ಉತ್ತೇಜಿತರಾದ ಮ್ಯಾನೇಜ್ ಮೆಂಟ್ ಸುವರ್ಣ ನ್ಯೂಸ್ ಚಾನಲ್ ಆರಂಬಿಸಿತು. ಅದು ಕೂಡ ಉಳಿದೆರಡು ಚಾನಲ್ ಗಳ ಮಧ್ಯೆ ತನ್ನ ಕ್ರೆಡಿಬಿಲಿಟಿಯನ್ನು ಕಾಯ್ದುಕೊಂಡಿತು. ಆದರೆ ಟಿ.ಆರ್.ಪಿ ಏರಲಿಲ್ಲ. ಭಟ್ಟರ ಕುರ್ಚಿಯ ಮೇಲೆ ರಂಗನಾಥನ ಕಣ್ಣು ಬಿತ್ತು.
ಶಶಿಧರ್ ಮತ್ತು ರಂಗನಾಥನ ಗುಣ ಸ್ವಭಾವವನ್ನು ಸ್ವಲ್ಪ ವಿಶ್ಲೇಷಿಸಿದರೂ ಸಾಕು ಯಾಕೆ ಹೀಗಾಗುತ್ತದೆ ಎಂಬುದು ಗೊತ್ತಾಗಿಬಿಡುತ್ತದೆ. ಶಶಿಧರ್ ಗುಂಪುಗಾರಿಕೆ ಮಾಡುವವರಲ್ಲ. ತನಗನ್ನಿಸಿದ್ದನ್ನು ಒಬ್ಬಂಟಿಯಾಗಿಯೇ ಮಾಡುತ್ತಾರೆ; ಎದುರಿಸುತ್ತಾರೆ. ಅದು ತನ್ನ ಮೇಲಿರುವ ಅತಿಯಾದ ನಂಬಿಕೆಯೂ ಇರಬಹುದೇನೋ. ಹತ್ತಾರು ಪತ್ರಿಕೆಗಳನ್ನು ಹತ್ತಿಳಿದು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬಂದವರು. ಹಾಗೆ ಪಥ ಬದಲಿಸಿದಾಗಲೆಲ್ಲ ವಾರಗಟ್ಟಲೆ ನಿದ್ದೆ ಮಾಡುತ್ತಾ, ಪಾನ್ ಜಗಿದುಕೊಂಡು, ಫಿಲಾಸಪಿ ಬುಕ್ ಓದುತ್ತಾ ಕಾಲ ಕಳೆಯುವ ಅಸಾಮಿ ಅವರು. ಕರಪ್ಟ್ ಆಲ್ಲ. ಅವರ ಮೇಲೆ ಆಪಾದನೆಗಳಿಲ್ಲ. ಆದರೆ ಸ್ನೇಹವನ್ನಾಗಲಿ, ಬಂಧುತ್ವವನ್ನಾಗಲಿ ಅಧಿಕಾರವನ್ನಾಗಲಿ ಸಂಭಾಳಿಸುವ ಕಲೆ ಗೊತ್ತಿಲ್ಲದವರು. ಹಾಗಾಗಿ ಅವರ ಹಿಂದೆ ’ಹೌದಪ್ಪ’ಗಳಿಲ್ಲ. ಅಪೀಸಿನಲ್ಲಿ ಯಾರಾದರೂ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅವರನ್ನು ಸೌಮ್ಯವಾಗಿಯೇ ಗದರುತ್ತಾರೆ. ಅವರು ತಿದ್ದಿಕೊಳ್ಳದಿದ್ದರೆ ತಾವೇ ಅದನ್ನು ಮಾಡುತ್ತಾರೆ. ಕತ್ತೆ ದುಡಿದ ಹಾಗೆ ದುಡಿಯುತ್ತಾರೆ.ಅದು ಅವರ ದೌರ್ಬಲ್ಯವೂ ಹೌದು; ಶಕ್ತಿಯೂ ಹೌದು.
ರಂಗನಾಥ್ ಮಹತ್ವಾಕಾಂಕ್ಷಿ. ಮೈಸೂರಿನ ’ಮಹಾನಂದಿ’ ದಿನ ಪತ್ರಿಕೆಯಿಂದ ಪತ್ರಿಕಾರಂಗಕ್ಕೆ ಬಂದವರು. ವಿ. ಎನ್. ಸುಬ್ಬಾರಾವ್ ನೇತೃತ್ವದ’ ನಾವು-ನೀವು’ ವಾರಪತ್ರಿಕೆಯ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಯೂ ಶಶಿಧರ್ ಭಟ್ಟರೇ ಮುಖ್ಯ ವರದಿಗಾರರಾಗಿದ್ದರು. ಅಲ್ಲಿಯೂ ರಂಗನಾಥ್ ಚಿಕ್ಕ ಪುಟ್ಟ ತರಲೆ ಮಾಡುತ್ತಿದ್ದರು. ತುಂಬಾ ಸುಂದರವಾಗಿ ಹೊರಬರುತ್ತಿದ್ದ ಆ ಪತ್ರಿಕೆ ಬಹು ಕಾಲ ಬಾಳಲಿಲ್ಲ. ಅನಂತರ ಶಶಿಧರ್ ಕನ್ನಡಪ್ರಭ ಸೇರಿದರು. ರಂಗನಾಥ್ ಇಂಗ್ಲಿಷ್ ಪತ್ರಿಕೆಗಳಿಗೆ ಬರೆಯುತ್ತಾ ಅಲ್ಲಿ- ಇಲ್ಲಿ ಓಡಾಡಿಕೊಂಡಿದ್ದರು. ಮುರ್ನಾಲ್ಕು ವರ್ಷಗಳ ನಂತರ ರಂಗನಾಥ್ ಕೂಡಾ ಕನ್ನಡ ಪ್ರಭ ಸೇರಿಕೊಂಡರು.
ಈಗ ಇತಿಹಾಸ ಮರುಕಳಿಸುತ್ತಿದೆ. ಭಟ್ಟರು ಕನ್ನಡಪ್ರಭ ಬಿಟ್ಟು ಹತ್ತು ವರ್ಷ ಕಳೆದಿದೆ. ಆದರೆ ಇನ್ನೂ ಅವರು ತಾಂತ್ರಿಕವಾಗಿ ಅಲ್ಲಿಯ ಉದ್ಯೋಗಿಯೇ. ಯಾಕೆಂದರೆ ಅವರ ಅಕೌಂಟ್ ಇನ್ನೂ ಸೆಟ್ಲಾಗಿಲ್ಲ.
ಭಟ್ಟರ ಹಾಗೆ ರಂಗನಾಥ್ ಸೌಮ್ಯ ಅಲ್ಲ. ಅವರೊಬ್ಬ ಡಿಕ್ಟೇಟರ್. ತನ್ನ ಸಬಾರ್ಡಿನೇಟರನ್ನು ಸದಾ ಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ಕಳೆದ ಚುನಾವಣೆಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರೊಬ್ಬರನ್ನು ಟೀವಿ ಚಾನಲ್ಲೊಂದು ಡಿಸ್ಕಷನ್ ಗೆ ಕರೆದಿತ್ತು. ಆದರೆ ಅವರು ಬರಲಿಲ್ಲ. ಯಾಕೆಂದರೆ ಟೀವಿ ಡಿಸ್ಕಷನ್ ಗೆ ಹೋಗಬಾರದೆಂದು ಸಂಪಾದಕರ ಅಪ್ಪಣೆಯಾಗಿತ್ತಂತೆ.
ಒಂದು ಪತ್ರಿಕೆಯ ಸಂಪಾದಕರಾಗಿದ್ದರೂ ಸಂಪಾದಕಿಯ ಬರೆಯದ ಸಂಪಾದಕರು ಅವರು. ಆದರೆ ತಮ್ಮ ಸುತ್ತ ಹೊಗಳು ಭಟ್ಟರ ಪಡೆಯೊಂದನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮೇಲೆಯೇ ನಂಬಿಕೆಯಿಲ್ಲದ, ಕೀಳರಿಮೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೀಗಿರುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ. ನಂಬಿದಂತೆ ನಟಿಸುತ್ತಾರೆ. ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾರೆ. ಅದಕ್ಕೆ ಇರಬಹುದು ರಂಗನಾಥರಿಗೆ ಪತ್ರಿಕೋಧ್ಯಮದಲ್ಲಿ ’ರೀಲ್ ರಂಗ’ ಎಂಬ ಹೆಸರಿದೆ. ಬಹುಶಃ ಈ ಗುಣಗಳೇ ರಾಜೀವ್ ಚಂದ್ರಶೇಖರ್ ನ್ನು ಮರಳು ಮಾಡಿರಬಹುದು. ’ಸೆಲ್ಫ್ ಮಾರ್ಕೇಟಿಂಗ್’ ಎಂಬುದು ರಂಗನಾಥರ ಗುಣ ವಿಶೇಷ. ಆದರೆ ಅದು ಟೀವಿ ಮುಂದೆ ನಡೆಯದು. ಕ್ಯಾಮರ ಎಲ್ಲವನ್ನೂ ಬಿಚ್ಚಿಡುತ್ತದೆ. ಡಿಷ್ಕಷನ್ ನಲ್ಲಿ ನೀವು ಗಮನಿಸಿರಬಹುದು.ಅವರು ಕ್ಯಾಮರ ನೋಡಿ ಮಾತಾಡುವುದಿಲ್ಲ; ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಆದರೆ ಟೀವಿಗೆ ಅದೇ ಮುಖ್ಯ.
ಈಗ ರಂಗನಾಥ್ ಸುವರ್ಣ ನ್ಯೂಸ್ ಚಾನಲ್ ಅನ್ನು ನಂ.ಒಂದು ಚಾನಲ್ ಮಾಡಲು ಹೊರಟಿದ್ದಾರೆ. ರವಿ ಹೆಗಡೆ ಎಂಬ ಪೇಜ್ ಲೇಔಟ್ ಅರ್ಟಿಸ್ಟ್, ಜೋಗಿ-ಉದಯಮರಕಿಣಿ ಎಂಬ ಸಿನಿಮಾ ಬರಹಗಾರರು ಅವರ ಹಿಂದೆ ಹೊರಟು ನಿಂತಿದ್ದಾರೆ. ವಿಜಯ ಕರ್ನಾಟಕದ ಆರ್ಟಿಸ್ಟ್ ಒಬ್ಬರು ರಂಗನಾಥ್ ಬಳಗ ಸೇರಲು ರಾಜಿನಾಮೆ ಕೊಟ್ಟರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಹಾಗೆಯೇ ಕರಗಿ ಹೋಗಿದೆ. ಟೀವಿ೯ಗೂ ರಂಗನಾಥ್ ಬಲೆ ಬೀಸಿದ್ದಾರಂತೆ. ’ಮೊದಲು ನೀವು ಹೋಗಿ ಸ್ಟಾಂಡ್ ಆಗಿ ಆಮೇಲೆ ನೋಡೋಣ’ ಎಂದಿದ್ದಾರಂತೆ ರಂಗನಾಥ್ ಭಾರದ್ವಾಜ್. ಪ್ರಿಂಟ್ ಮೀಡಿಯಾದಿಂದ ಇಷ್ಟು ದೊಡ್ಡ ದಂಡು ಸುವರ್ಣಕ್ಕೆ ಹೋದರೆ ಅಲ್ಲೊಂದಷ್ಟು ಜನ ಕೆಲಸ ಕಳೆದುಕೊಳ್ಳಬಹುದು. ಸೀಮಿತ ಅವಕಾಶಗಳುಳ್ಳ ಕನ್ನಡ ಪತ್ರಿಕಾರಂಗ ಈ ಎಲ್ಲಾ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸುತ್ತಿದೆ.
ದೃಶ್ಯ ಮಾಧ್ಯಮವೆಂಬ ’ಅಗ್ನಿಗೋಳ’
Posted by
Nishada Kanjari
on Monday, July 27, 2009
/
Comments: (0)

ಪತ್ರಿಕೋದ್ಯಮ ಎಂಬುದು ಅದರ ಹೆಸರಲ್ಲೇ ಅಡಗಿರುವಂತೆ ಅದೊಂದು ಉಧ್ಯಮ. ಉಧ್ಯಮ ಅಂದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಇದ್ದದ್ದೇ. ಹಿಂದೆಲ್ಲಾ ಅದು ಎದ್ದು ಕಾಣುತ್ತಿರಲಿಲ್ಲ. ಅದನ್ನು ಸೇವಾಕ್ಶೇತ್ರವೇಂದೇ ಪರಿಗಣಿಸಲಾಗುತ್ತಿತ್ತು. ಅದು ನಿಜವೂ ಆಗಿತ್ತು. ಸಮಾಜದ ಬಗ್ಗೆ, ಸಾಮಾಜಿಕ ಬದಲಾವಣೆಯ ಬಗ್ಗೆ ಕನಸಿದ್ದವರು, ತುಡಿತವಿದ್ದವರು ಪತ್ರಕರ್ತರಾಗುತ್ತಿದ್ದರು. ಹಾಗಾಗಿ ಸಂಬಳ ನಗಣ್ಯವಾಗುತ್ತಿತ್ತು. ಬದುಕು ಹೇಗೋ ಸಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿವೆ. ಪತ್ರಿಕೋಧ್ಯಮಕ್ಕೆ ಗ್ಲಾಮರ್ ಬಂದಿದೆ. ಈಗದು ಥಳುಕು ಬಳುಕಿನ ಲೋಕ. ಅಸ್ಖಲಿತವಾದ ಮಾತು, ವಯ್ಯಾರದ ನಡೆನುಡಿ, ಆಕರ್ಷಕ ವ್ಯಕ್ತಿತ್ವ, ಹದಿನೆಂಟರಿಂದ ೨೪ರೊಳಗಿನ ವಯೋಮಿತಿಯಿದ್ದರೆ ಯಾರು ಬೇಕಾದರೂ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಲು ಪ್ರಯತ್ನಿಸಬಹುದು; ತಲೆಯಲ್ಲಿ ಮಿದುಳಿಲ್ಲದಿದ್ದರೂ...! ಮುದ್ರಣ ಮಾಧ್ಯಮಕ್ಕೆ ಇಷ್ಟು ಸುಲಭದಲ್ಲಿ ಪ್ರವೇಶ ಸಾಧ್ಯವಿಲ್ಲ. ಅಲ್ಲಿ ಸಾಹಿತ್ಯ, ಕಲೆ, ಸಾಮಾನ್ಯ ಜ್ನಾನದ ಅರಿವಿನ ಜೊತೆ ಭಾಷೆಯ ಬಗ್ಗೆ ಹಿಡಿತವಿರಬೇಕು.
ಈಗಂತೂ ಪತ್ರಿಕೋಧ್ಯಮ ಸೇವಾಕ್ಶೇತ್ರವಲ್ಲ. ಹಾಗಾಗಿ ಸಾಪ್ಟ್ ವೇರ್ ಕ್ಶೇತ್ರದಲ್ಲಿ ಸಿಗುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಜಾಸ್ತಿ ಸಂಬಳ ಸಿಗುತ್ತದೆ. ಸಿಗದವರು ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಗಿಂಬಳಕ್ಕಾಗಿ ಕೈಚಾಚುತ್ತಾರೆ. ರಾಜಕಾರಣಿಗಳ ಗುಟ್ಟು ಕಾಪಾಡುತ್ತಾರೆ; ಉಧ್ಯಮಿಗಳ ಹಿತ ಕಾಯುತ್ತಾರೆ. ಅಂತಹ ಪತ್ರಕರ್ತನೊಬ್ಬನ ಬಗ್ಗೆ ’ಅಗ್ನಿ’ ವಾರಪತ್ರಿಕೆ ಈ ವಾರ ಕವರ್ ಸ್ಟೋರಿ ಮಾಡಿದೆ.
’ಟಿವಿ೯ನಲ್ಲಿ ಕ್ರಿಮಿ ರೋಲ್ ಕಾಲ್ ರಾಘವೇಂದ್ರ’ ಎಂಬುದು ಅದರ ಹೆಡ್ಡಿಂಗ್. ಮಂಜುನಾಥ ಅದ್ದೆ ಬರೆದಿರುವ ಈ ಲೇಖನ ಸಮತೂಕವುಳ್ಳವಾದ ವರದಿಯಾಗಿದ್ದರೂ ’ಅಗ್ನಿ’ ಸಮತೂಕವುಳ್ಳ ಪತ್ರಿಕೆಯೇನಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅಥವಾ ಅವಕಾಶ ಕಲ್ಪಿಸಿಕೊಂಡು ಬ್ರಾಹ್ಮಣರನ್ನು ಬಯ್ಯುವುದನ್ನು, ಶೂದ್ರರನ್ನು ಹೊಗಳುವುದನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ.
’ಅಗ್ನಿ’ಯ ಝಳಕ್ಕೆ ಸಿಕ್ಕ ರಾಘವೇಂದ್ರನ ಶಿಷ್ಯರಲ್ಲಿ ಕೆಲವರು ಸುವರ್ಣನ್ಯೂಸ್ ಚಾನಲ್ ನತ್ತ ಇಣುಕಿ ನೋಡುತ್ತಿದ್ದಾರೆಂದು ನಿಷಾದಕ್ಕೆ ವರದಿಯಾಗಿದೆ. ಸುವರ್ಣದಲ್ಲಿ ಒಂದಷ್ಟು ಜನಕ್ಕೆ ಗೇಟ್ ಪಾಸ್ ನೀಡಲಾಗಿದೆ. ಇತ್ತೀಚೆಗೆ ಅಲ್ಲಿಂದ ಹೊರಬಂದವರಲ್ಲಿ ಚಾಮರಾಜ ಸವಡಿ ಒಬ್ಬರು. ಸಂವೇದನಾಶೀಲ ಬರಹಗಾರರಲ್ಲಿ ಒಬ್ಬರಾದ ಸವಡಿ ಪ್ರಿಂಟ್ ಮೀಡಿಯಾದಲ್ಲಿ ಪಳಗಿದವರು. ಜನಪರ ಕಾಳಜಿಯುಳ್ಳ ಯುವ ಬರಹಗಾರ. ಸಮಾಜವಾದಿ ಚಿಂತನೆಯ ಝಳಕ್ ಅವರ ಬರಹಗಳಲ್ಲಿದೆ. ಒಂಚೂರು ಸಹನೆ, ವಿವೇಚನೆ ಇರುತ್ತಿದ್ದರೆ ಅವರು ಪ್ರಜಾವಾಣಿಯನ್ನು ಬಿಡುವ ಪ್ರಮೇಯವೇ ಬರುತ್ತಿರಲಿಲ್ಲ.
ಪ್ರಿಂಟ್ ಮೀಡಿಯಾದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಹೋಗುವವರ ಬಗ್ಗೆ ನನಗೆ ಅನುಕಂಪವಿದೆ. ಅದು ದೂರದ ಬೆಟ್ಟ. ಘಂಟೆಗಳ ಪರಿವೆಯಿಲ್ಲದೆ ಅಲ್ಲಿ ಕೆಲಸ ಮಾಡಬೇಕಾಗುತ್ತದೆ. ಸದಾ ಸ್ಪರ್ಧೆ. ಟಿಅರ್ ಪಿ ಮೇಲೆಯೇ ಕಣ್ಣು. ಮೊದಲು ಸುದ್ದಿ ಕೊಡುವ ಆತುರ. ಒತ್ತಡದ ಬದುಕು. ಕೆಲಸಕ್ಕೆ ಸೇರುವಾಗ ಕಳೆಕಳೆಯಾಗಿರುತ್ತಿದ್ದ ಹುಡುಗ-ಹುಡುಗಿಯರು ಬರಬರುತ್ತಾ ಪೇಲವರಾಗುತ್ತಾರೆ. ಕಸ್ತೂರಿ ಚಾನಲ್ಲಿನಲ್ಲಿ ಒಬ್ಬ ಹುಡುಗನಿದ್ದಾನೆ. ಹೆಸರು ನೆನಪಾಗುತ್ತಿಲ್ಲ. ನ್ಯೂಸ್ ರೀಡರ್. ಆತ ಹೊಸದಾಗಿ ಬಂದಾಗ ಅರಳುಗಣ್ಣುಗಳ ಮುಗ್ಧ ಸುಂದರಾಂಗ. ಈಗ ಮಂಗೋಲಿಯನ್ ಕಣ್ಣುಗಳ ಹ್ಯಾಪ್ ಮೋರೆಯ ಮಂಕಣ್ಣ.
ಮೊನ್ನೆ ಯಾರತ್ರನೋ ಮಾತಾಡ್ತಿದ್ದೆ. ಅವರೊಂದು ಸಂಗತಿ ಹೇಳಿದರು. ಸುದ್ದಿ ಚಾನಲ್ಲಿನಲ್ಲಿ ಹುಡುಗಿಯರು ಮನಸ್ಸಿಗೆ ಬಂದ ಟೈಮ್ ನಲ್ಲಿ ಗರ್ಭಿಣಿಯರಾಗಬಾರದಂತೆ. ಪರಸ್ಪರ ಮಾತಾಡಿಕೊಂಡು ಸರದಿ ಪ್ರಕಾರ ಬಸುರಿಯಾಗಬೇಕಂತೆ. ಹಾಗಂತ ಆಡಳಿತ ಮಂಡಳಿಯವರು ಕಿವಿ ಮಾತು ಹೇಳಿದ್ದಾರಂತೆ. ವೈಯಕ್ತಿಕ ಬದುಕು ಎಲ್ಲಿಗೆ ಬಂದು ನಿಂತಿದೆ ನೋಡಿ!
ಪ್ರಜಾವಾಣಿಯಂತ ಪತ್ರಿಕೆಯಿಂದ ವಲಸೆ ಹೋಗುವಾಗ ಎಚ್ಚರದಿಂದಿರಬೇಕು. ಕನ್ನಡ ಪತ್ರಿಕೋಧ್ಯಮಕ್ಕೆ ಅದು ಕೊನೆಯ ನಿಲ್ದಾಣ. ಅದೊಂಥರ ಸರಕಾರಿ ಆಪೀಸ್ ಇದ್ದ ಹಾಗೆ.ಅಲ್ಲಿ ಸೇರಿಕೊಳ್ಳುವುದು ಸ್ವಲ್ಪ ಕಷ್ಟ. ಒಮ್ಮೆ ಸೇರಿಕೊಂಡ ಮೇಲೆ ನಿವೃತ್ತಿಯವರೆಗೆ ಅಲ್ಲಿ ಕೆಲಸ ಮಾಡಬಹುದು. ಬರೆಯಲು ಬಾರದಿದ್ದರೂ ಕೆಲಸದಿಂದ ತೆಗೆದು ಹಾಕುವುದಿಲ್ಲ. ಹೆಚ್ಚೆಂದರೆ ಪ್ರಮೋಷನ್ ಕೊಡದಿರಬಹುದು. ಕೈ ತುಂಬಾ ಸಂಬಳ, ನಿಗದಿತ ಅವಧಿಯ ಕೆಲಸ, ಬೇಕೆನಿಸಿದಾಗ ರಜಾ ಸೌಲಬ್ಯ, ಕ್ಯಾಂಟಿನ್ ನಲ್ಲಿ ಪುಷ್ಕಳವಾದ ಧರ್ಮದ ಊಟ. ಆದರೂ ಜನ ದೃಶ್ಯ ಮಾಧ್ಯಮವೆಂಬ ಅಗ್ನಿಗೋಳಕ್ಕೆ ಮುತ್ತಿಕ್ಕಲು ಜನ ಬಯಸುತ್ತಾರೆ.
”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” -ಅಡಿಗ
ಮೀಡಿಯಾ ಮಿರ್ಚಿ-ಬ್ಯಾಡ್ಗಿಯೋ ಗುಂಟೂರೋ....
Posted by
Nishada Kanjari
on Sunday, July 19, 2009
/
Comments: (0)

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕೆಲಸ ಮಾಡಿರುವ ಜಿ ಎನ್ ಮೋಹನ ವಿಜಯಕರ್ನಾಟಕದಲ್ಲಿ ಇನ್ನು ಮುಂದೆ ಪ್ರತಿ ಶನಿವಾರ ’ಮೀಡಿಯಾ ಮಿರ್ಚಿ’ ಅಂಕಣ ಬರೆಯುತ್ತಾರೆ. ಒಳ್ಳೆಯ ಅಲೋಚನೆ.
ಎಲ್ಲಾ ಆರಂಭಗಳೂ, ಮೊದಲ ಹೆಜ್ಜೆಗಳೂ ಒಳ್ಳೆಯ ಉದ್ದೇಶಗಳನ್ನೇ ಹೊಂದಿರುತ್ತವೆ. ಆದರೆ ಅವು ಕಾರ್ಯರೂಪಕ್ಕೆ ಬಂದಾಗ, ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಸಾಧ್ಯತೆಗಳೂ ಇರುತ್ತವೆ.
ವಿಜಯಕರ್ನಾಟಕದಂತಹ ಪತ್ರಿಕೆಯಲ್ಲಿ ಏನು ಬಂದರೂ ಅದನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಆ ಹಿನ್ನೆಲೆ ಅದಕ್ಕಿದೆ. ಹಾಗೆ ನೋಡಿದರೆ ’ಸಂಶಯ’ವೇ ಒಬ್ಬ ಪತ್ರಕರ್ತನ ಸಹಜ ಗುಣಧರ್ಮವಾಗಬೇಕು. ಸಂಶಯಪಡುತ್ತಲೇ ಒಂದು ನಿರ್ಧಿಷ್ಟ ಅಭಿಪ್ರಾಯದೆಡೆಗೆ ಓದುಗ ಸಾಗುತ್ತಿರಬೇಕು. ಆದರೆ ಒಂದೇ ಫೆಪರನ್ನು ತರಿಸುವ ಕೆಳ ಮಧ್ಯಮವರ್ಗದವರು ಅದರಲ್ಲಿ ಬಂದದ್ದೆಲ್ಲವನ್ನು ನಿಜವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆ ಒಂದೇ ಪೇಪರು ತರಿಸಿಕೊಳ್ಳುವ ಬಹುಸಂಖ್ಯಾತರು ವಿಜಯಕರ್ನಾಟಕದ ಓದುಗರು ಎಂಬುದು ಕೂಡ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಹತ್ತಾರು ಪತ್ರಿಕೆಗಳನ್ನು ಓದುವ-ತಿರುವಿ ಹಾಕುವ ಸಾಮರ್ಥ್ಯವುಳ್ಳ ರಾಜಕಾರಣಿಗಳು ಅಲ್ಪಸಂಖ್ಯಾತರು. ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಹಾಗಾಗಿ ಈಗ ಹೊಸದಾಗಿ ಆರಂಭವಾಗಿರುವ ಮೀಡಿಯಾಮಿರ್ಚಿ ಬಹುಸಂಖ್ಯಾತರ ಮೇಲೆ ಪ್ರಭಾವ ಬೀರಬಲ್ಲ ಅಂಕಣ. ಅದಕ್ಕೆ ಜಿ.ಎನ್.ಮೋಹನ್ ಬಗ್ಗೆ ಅಷ್ಟೊಂದು ಟೀಕೆ-ಟಿಪ್ಪಣಿಗಳು ನಡೆಯುತ್ತಿವೆ.
ಮೋಹನ್ ಎಡಪಂಥಿಯ ವಿಚಾರಧಾರೆಯ ಬಗ್ಗೆ ಒಲವುಳ್ಳವರು. ಇತ್ತೀಚೆಗೆ ವೈಯಕ್ತಿಕವಾಗಿ ಅನುಕೂಲಸಿಂಧು ವರ್ತಮಾನಕ್ಕೆ ಒಗ್ಗಿಕೊಂಡಂತೆ ಭಾಸವಾಗುತ್ತಿರುವವರು. ಹಾಗಾಗಿ ವಿಜಯಕರ್ನಾಟ್ಕದ ಜೊತೆ ಬ್ಲೆಂಡ್ ಆಗಬಹುದು. ಮಿರ್ಚಿಮಸಾಲೆಗೆ ಹಾಕಿದ ಮೆಣಸು ಗುಂಟೂರಿನದೋ ಬ್ಯಾಡ್ಗಿಯದೋ ಘಾಟಿನ ಮೇಲೆ ನಿರ್ಧಾರವಾಗುತ್ತದೆ.
ಮೋಹನ್ ನಿಷ್ಪಕ್ಷಪಾತಿಯಾಗಿದ್ದರೆ ಮೊದಲು ಚಾಟಿ ಬೀಸಬೇಕಾದ್ದೇ ವಿಜಯಕರ್ನಾಟಕದ ಮೇಲೆ. ಅದು ಸಾಧ್ಯವಾಗಬಹುದೇ?
ಮೀಡಿಯಾದಲ್ಲಿ ಕೆಲಸ ಮಾಡುವವರೆಲ್ಲಾ ಕೂಲಿಯಾಳುಗಳು. ಅವರಿಗೊಬ್ಬ ಮೇಸ್ತ್ರಿ ಇರುತ್ತಾನೆನ್ನಿ. ಅವನಿಗೆ ಒಂದಷ್ಟು ಅಧಿಕಾರವೂ ಇರುತ್ತದೆ. ಆದರೆ ಪರಮಾಧಿಕಾರ ಯಜಮಾನನ ಕೈಯಲ್ಲಿರುತ್ತದೆ. ಆತನಿಗೆ ಕೂಲಿಯಾಳುಗಳ ಸಮಸ್ಯೆಯ ಅರಿವಿರುವುದಿಲ್ಲ. ಅವನೊಬ್ಬ ಬ್ಯುಸಿನೆಸ್ ಮೆನ್ ಅಷ್ಟೇ. ಅವನು ಮಿದುಳಿನಿಂದ ಯೋಚಿಸುತ್ತಾನೆ; ಹೃದಯದಿಂದಲ್ಲ.
ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ ಮಾಡುತ್ತೇನೆ ಎಂದು ಮೋಹನ್ ಹೇಳಿದ್ದಾರೆ. ನೋಡೋಣ; ಅವರು ಕಲಿತ ಪಾಠಗಳಿಗೆ ವಿಜಯಕರ್ನಾಟಕ ಇನ್ನೊಂದು ಅಧ್ಯಾಯ ಸೇರಿಸುತ್ತಾ.....?
ಪತ್ರಿಕೋಧ್ಯಮದ ಚಿತ್ತ ಎತ್ತ?
Posted by
Nishada Kanjari
on Thursday, July 16, 2009
/
Comments: (0)

ಮೊನ್ನೆ ಕಸ್ತೂರಿ ಚಾನಲ್ ನಲ್ಲಿ ನ್ಯೂಸ್ ನೋಡ್ತಾ ಕೂತಿದ್ದೆ. ಮೊದಲ ಹೆಡ್ ಲೈನ್ ಸುದ್ದಿ ’ಹೈಕೋರ್ಟ್ ಗೆ ಮೋಹಿನಿ ಕಾಟ’. ಈಸುದ್ದಿಯನ್ನು ಯಾವುದೋ ಪೇಪರಿನಲ್ಲಿ ನೋಡಿದ ನೆನಪು. ಒಂದು ಸೆಟೈರ್ ಬರಹಕ್ಕೆ ವಸ್ತುವಾಗಬೇಕಿದ್ದ ಈ ವದಂತಿ ದೃಶ್ಯಮಾಧ್ಯಮದಲ್ಲಿ ಪ್ರೈಮ್ ಟೈಮ್ ನಲ್ಲಿ ಸುದ್ದಿಯಾಗಬೇಕಿದ್ದರೆ...ಅದರ ಹಿಂದೆ ಕೆಲಸ ಮಾಡಿದ್ದ ವರದಿಗಾರ/ರ್ತಿ, ಇನ್ಪುಟ್ ಎಡಿಟರ್,ಔಟ್ಪುಟ್ ಎಡಿಟರ್ ಗಳ ತಲೆಯಲ್ಲಿ ಮೋಹಿನಿ ನಾಟ್ಯವಾಡುತ್ತಿದ್ದಳೆ? ಸಂಶಯ ಪಡಬೇಕಾದ ವಿಷಯ.
ಆ ಸುದ್ದಿ ನೋಡುತ್ತಿರುವಾಗ ನನ್ನ ಪಕ್ಕದಲ್ಲಿ ಹಿರಿಯ ಪತ್ರಕರ್ತರೊಬ್ಬರಿದ್ದರು.’ಏನ್ ಸರ್, ಪತ್ರಿಕೋಧ್ಯಮ ಹೀಗಾಗಿ ಹೋಯ್ತು’ ಅಂದೆ.
’ಎಲ್ಲಾ ಟಿಅರ್ ಪಿ ಮಹಿಮೆ’ ಅಂದರು. ’ಹಾಗಾದರೆ ಅದೆಲ್ಲೋ ನ್ಯೂಸ್ ಓದ್ತಾ ಓದ್ತಾ ಬಟ್ಟೆ ಕಳ್ಚ್ತಾ ಬೆತ್ತಲೆ ಆಗ್ತಾರಂತೆ. ಅದು ಇಲ್ಲಿಯೂ ಬರ್ಬಹುದಾ? ಅಂದೆ. ’ಖಂಡಿತಾ’ ಎಂದರವರು.
ಕುತೂಹಲಕ್ಕೆ ಮೋಹಿನಿಕಾಟದ ಪೇಪರು ಹುಡುಕಿದೆ. ಅದು ಬಿಜೆಪಿಯ ಪಂಚಾಂಗ ’ವಿಜಯ ಕರ್ನಾಟಕ’!. ’ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ. ಅಮಾವಾಸ್ಯೆಯ ರಾತ್ರಿ ತಂಗಾಳಿಯಲ್ಲಿ ತೇಲುವ ಚೆಲುವೆ, ದೆವ್ವದ ಕಾಟಕ್ಕೀಡಾದ ಹೈಕೋರ್ಟ್?’ ಇಷ್ಟುದ್ದದ ಹೆಡ್ಡಿಂಗಿನ ಅರ್ದ ಪುಟಕ್ಕೆ ಹತ್ತಿರದ ಈ ಇನ್ವೆಸ್ಟಿಗೇಟಿವ್ ಸ್ಟೋರಿ ಬರೆದ ವರದಿಗಾರ ಯಾರಪ್ಪಾಂತ ನೋಡಿದರೆ,ಅದು ಧ್ಯಾನ್ ಪೂಣಚ್ಚ.
ಹೀಗೂ ಊಂಟೆ? ಸ್ಟೈಲಿನಲ್ಲಿ ಕತೆ ಹಣೆದದ್ದೇ ಹಣೆದದ್ದು. ಈತ ಹಿಂದೆ ಮುತ್ತಪ್ಪ ರೈ ನೇತೃತ್ವದ’ಗರ್ವ’ ಟಾಬ್ಲೈಡ್ ನಲ್ಲಿ ಕೆಲಸ ಮಾಡುತ್ತಿದ್ದ. ಆ ಪತ್ರಿಕೆ ಮುಚ್ಚಲು ಆತನೇ ನೆಪವಾಗಿದ್ದ. ಅದು ಹೇಗಂದರೆ; ಸುವರ್ಣ ಚಾನಲ್ ನ ಬಗ್ಗೆ ಆತ ಕವರ್ ಸ್ಟೋರಿ ಮಾಡಿದ್ದ. ಇದು ಅಲ್ಲಿನ ಸಿಬ್ಬಂದಿಯಲ್ಲಿ ಹಲವರ ಮನಸ್ಸನ್ನು ಘಾಸಿಗುಳಿಸಿತ್ತು. ಉನ್ನತ ಹುದ್ದೆಯಲ್ಲಿದ್ದ ಒಂದು ಹುಡುಗಿಯಂತು ಅವಮಾನ ಸಹಿಸಲಾರದೆ ಕೆಲಸ ಬಿಟ್ಟು ಹೋದಳು. ಇನ್ನೊಬ್ಬರು ಮುತ್ತಪ್ಪರೈಯವರ ಆಪ್ತರ ಮುಂದೆ ನೋವು ತೋಡಿಕೊಂಡರು. ಅದರ ಸರ್ಕ್ಯೂಲೇಶನ್ ಅಷ್ಟರಲ್ಲೇ ಇದೆ, ಎಂದುಕೊಂಡರೈ ಪತ್ರಿಕೆ ಮುಚ್ಚಲು ಆದೇಶ ನೀಡಿದರು.
ಅಂತಪ್ಪಾ ಧ್ಯಾನ್ ಪೂಣಚ್ಚನಿಂದ ಆರಂಭಗೊಂಡ ಮೋಹಿನಿ ಕಾಟ ವಿಜಯ ಕರ್ನಾಟಕವನ್ನು ಕಾಡಿ, ಕಸ್ತೂರಿಗೆ ಬಡಿದು, ಮುಂದೆ ನಿಗೂಢ ಜಗತ್ತನ್ನು ವ್ಯಾಪಿಸಿ,ಕರ್ನಾಟಕದ ಜನತೆ ’ಹೀಗೂ ಉಂಟೇ’ ಎಂದು ಮೂಗಿನ ಮೇಲೆ ಬೆರಳಿಡಬಹುದು.