Visitors

ಜನಶ್ರೀ ಎಂಬ ಆನೆಯೂ ಸುದ್ದಿಚಾನಲ್ ಗಳೆಂಬ ನಾಯಿಗಳೂ





ಮೇಲಿನ ಪೋಟೋ ಗಮನಿಸಿದ್ದೀರಾ? ಇದನ್ನು ನನ್ನ ಗೆಳೆಯನೊಬ್ಬ ನನಗೆ ಮೇಲ್ ಮಾಡಿದ್ದ. ಜೊತೆಗೆ ಆತ ಹೇಳಿದ; ಒರಿಜನಲ್ ಪೋಟೊದಲ್ಲಿ ಇಲ್ಲದ ಮೋಡಿಫೈಡ್ ಗ್ರಾಪಿಕ್ ಮಾಡಿದ್ದೇನೆ, ಖೆಡ್ಡಾ...ಹ್ಹ..ಹ್ಹಾ.. ಎಂದು ನಗಾಡಿದ.

ಇದನ್ನು ನೋಡಿ ನಿಮಗೇನನ್ನಿಸಿತೋ ಅದು ನನಗೆ ಗೊತ್ತಿಲ್ಲ. ಆದರೆ ಟೀವಿ೯ ಮುಖ್ಯಸ್ಥರಾಗಿರುವ ಮಹೇಂದ್ರ ಮಿಶ್ರಾ ಅವರಿಗೆ ಕಂಡಾಬಟ್ಟೆ ಸಿಟ್ಟು ಬಂದಿತ್ತು. ’ವೋ ಹಾತಿ ಹೈ ಕ್ಯಾ? ಹಮ್ ಕ್ಯಾ ಹೈ ಕುತ್ತಾ? ವೋ ಕ್ಯಾ ಸಮ್ಜತಾ ಹೈ?’ ಎಂದೆಲ್ಲಾ ರೇಗಾಡಿದ್ದರು.

ನನಗೆ ಆ ಹೊರ್ಡಿಂಗ್ಸ ಹಿಂದೆ ಕೆಲಸ ಮಾಡಿದ ಮನಸ್ಸುಗಳ ಬಗ್ಗೆ ಕುತೂಹಲ ಮೂಡಿತು. ಅವರು ಪ್ರಾಣಿಗಳನ್ನೇ ರೂಪಕಗಳನ್ನಾಗಿ ಯಾಕೆ ಆಯ್ಕೆ ಮಾಡಿಕೊಂಡರು? ಸರಿ, ’ಆನೆ ನಡೆದುದೇ ದಾರಿಯಲ್ತೆ’ ಎಂದು ಆದಿ ಕವಿ ಪಂಪ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ಕನ್ನಡದ ಮೂರ್ನಾಕು ಸುದ್ದಿ ಚಾನಲ್ ಗಳು ಈಗಾಗ್ಲೇ ಹಾದಿ ಮಾಡಿಕೊಂಡು ಬಹುದೂರ ಸಾಗಿ ಬಂದಾಗಿದೆ. ಜನಶ್ರೀ ಯಾವ ಹೊಸ ಹಾದಿಯನ್ನು ಮಾಡುತ್ತೆ?

ಜನಶ್ರೀ ಆನೆಯ ಅಹಂಕಾರ, ನಡಿಗೆಯ ಗತ್ತು ನೋಡಿ! ’ಸೈಡ್ ಪ್ಲೀಸ್’ ಎಂದು ಆನೆ ಯಾರಿಗೆ ಹೇಳುತ್ತೆ? ಅದು ನಡೆದು ಬರುತ್ತಿರುವ ದಾರಿಯಲ್ಲಿರುವ ಸಣ್ಣಪುಟ್ಟ ಶ್ವಾನಗಳಿಗೆ. ಆ ಶ್ವಾನಗಳ ಮೈ ಬಣ್ಣವನ್ನು ಗಮನಿಸಿ. ಅದು ಈಗಾಗಲೇ ಅಸ್ತಿತ್ವದಲ್ಲಿರುವ ಸುದ್ದಿ ಚಾನಲ್ ಗಳನ್ನು ಪ್ರತಿನಿಧಿಸುತ್ತೆ ಅಲ್ಲವೇ? ಅಲ್ಲಿ ಇನ್ನೂ ಹಲವು ನಾಯಿಗಳಿವೆ ಅವು ಪತ್ರಿಕೆಗಳಿರಬಹುದೇ? ಅಂದರೆ ಜನಶ್ರೀ ದೃಷ್ಟಿಯಲ್ಲಿ ಮಾದ್ಯಮದವರೆಲ್ಲ ನಾಯಿಗಳೇ? ಇಂಥ ಕೀಳುಮಟ್ಟದ ಅಭಿರುಚಿಯಿರುವವರನ್ನು ನಾವು ಯಾವ ಪ್ರಾಣಿಗೆ ಹೋಲಿಸಬಹುದು?

ಇಲ್ಲಿ ನನಗೆ ಇನ್ನೊಂದು ಕುತೂಹವಿದೆ. ಈ ಹೋರ್ಡಿಂಗ್ಸ್ ಅನ್ನು ರೂಪಿಸಿದವರಿಗೆ ಹೋಲಿಕೆಗೆ ನಾಯಿಯೇ ಯಾಕೆ ನೆನಪಾಯಿತು? ಈ ಭೂಮಿಯ ಮೇಲೆ ಅನೇಕ ಪ್ರಾಣಿಗಳಿವೆ. ಕತ್ತೆಯಿದೆ, ಕುದುರೆಯಿದೆ, ಹಂದಿಯಿದೆ, ಹೆಗ್ಗಣವಿದೆ, ಇಲಿಯಿದೆ....ಇದನ್ನೆಲ್ಲಾ ಬಿಟ್ಟು ನಾಯಿಯೇ ನೆನಪಾಗಬೇಕಾದರೆ ನಾಯಿಗೂ ಅವರಿಗೂ ಜನ್ಮ ಜನ್ಮಾಂತರದ ಸಂಬಂಧವಿರಲೇಬೇಕು. ಈ ಜನ್ಮದಲ್ಲಿಯೂ ಅವರು ಅನೇಕ ನಾಯಿಗಳನ್ನು ಸಾಕಿರಬೇಕು. ಅದಕ್ಕೆ ಕಾಲ ಕಾಲಕ್ಕೆ ರೊಟ್ಟಿ ಹಾಕಿ ಸಾಕುತ್ತಿರಬೇಕು. ಅವು ಕೂಡಾ ಸ್ವಾಮಿನಿಷ್ಠೆ ತೋರಿಸುತ್ತಿರಬೇಕು. ಸ್ವಾಮಿಜಿಯೊಬ್ಬರು ಪತ್ರಕರ್ತರನ್ನು ನಾಯಿಗಳೆಂದು ಕರೆದು ಇದನ್ನು ಪುಷ್ಟಿಕರಿಸಿದ್ದಾರೆ.ಪತ್ರಕರ್ತರು ಪ್ರಜಾಪ್ರಭುತ್ವದ ಕಾವಲು ನಾಯಿಗಳೆಂದು ತಲೆ ಮಾಸಿದ ಒಂದಷ್ಟು ಪತ್ರಕರ್ತರು ಬಡಬಡಿಸುತ್ತಿರುವುದು ಆನೆಯ ದಪ್ಪ ಚರ್ಮಕ್ಕೂ ತಾಗಿ ಅದು ’ಸೈಡ್ ಪ್ಲೀಸ್’ ಅನ್ನುತ್ತಿರಬಹುದೇ?

ಜನಶ್ರೀ ಹೆಸರಿನ ಬಗ್ಗೆನೇ ನನಗೆ ತಕರಾರು ಇದೇರಿ.. ಜನ ಅಂದರೆ ಜನತೆ, ಜನಸಾಮಾನ್ಯರು. ಶ್ರೀ ಅಂದರೆ ಸಂಪತ್ತು. ಜನಸಾಮಾನ್ಯರು ಮತ್ತು ಶ್ರೀಮಂತಿಕೆ ಹ್ಯಾಗ್ರಿ ಒಂದೇ ಕಡೆ ಸೇರುತ್ತೆ? ಇದೇ ಪೆದ್ದು ಪ್ರಶ್ನೆಯನ್ನು ನನ್ನ ಗೆಳೆಯನ ಮುಂದಿಟ್ಟೆ. ಅದಕ್ಕವನು, ಅಯ್ಯೋ ಪೆದ್ದೆ ಜನ ಅಂದ್ರೆ ಜನಾರ್ಧನ ರೆಡ್ಡಿ ಶ್ರೀ ಅಂದ್ರೆ ಶ್ರೀರಾಮುಲು ಅಂದ. ಓ ಅರ್ಥಗರ್ಭಿತವಾಗಿದೆ ನಾಮಧೇಯ, ಅವರಿಬ್ಬರು ಬರುತ್ತಿದ್ದರೆ ಮದಗಜಗಳು ಮೇಲೇರಿ ಬಂದಂತೆ ಎಂದು ನಾನೂ ನಕ್ಕೆ.

ನನ್ನ ಗೆಳೆಯ ಚಿತ್ರದಲ್ಲಿ ಖೆಡ್ಡ ಬಿಡಿಸಿದ. ನಿಜವಾದ ಖೆಡ್ಡಾ ತೋಡಬೇಕಾದವರು ಮೌನವಾಗಿದ್ದಾರೆ. ಮೌನಕ್ಕೆ ಅಪಾರ ಶಕ್ತಿ ಇದೆ ಎಂದು ನಂಬಿರುವವಳು ನಾನು. ಒಂದು ದಿನ ಆ ಶಕ್ತಿಯ ಸ್ಫೋಟ ಆಗಲೇ ಬೇಕು. ಈಗ ಆನೆ ಖೆಡ್ಡಾದಲ್ಲಿ ಬೀಳುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಆದರೆ ಆಲ್ಲಿರುವ ಪತ್ರಕರ್ತರನ್ನು ಗಮನಿಸಿದರೆ ಅದು ಸಕ್ಕರೆಬೈಲಿಗೆ ಹೋಗುವುದರಲ್ಲಿ ಸಂಶಯವಿಲ್ಲ ಅನ್ನಿಸುತ್ತೆ. ಸಕ್ಕರೆಬೈಲ್ ಗೊತ್ತಲ್ಲಾ, ಆನೆ ತರಬೇತಿ ಕೇಂದ್ರ.

ಆನೆ ಭೂಮಿಯ ಮೇಲೆ ವಾಸಿಸುತ್ತಿರುವ ಅತಿ ದೊಡ್ಡ ಪ್ರಾಣಿ. ಅದು ಕಾಡಿನಲ್ಲಿರಲಿ, ನಾಡಿನಲ್ಲಿರಲಿ ಅದರ ವಿದ್ವಂಸಕ ಗುಣಗಳಿಂದಾಗಿ ಅದರ ಬಗ್ಗೆ ಜನರಿಗೆ ಒಂದು ರೀತಿಯ ಭಯ ಇದ್ದೇ ಇದೆ. ಅದಕ್ಕೆ ನೆಲ ಕಾಣಿಸುವುದಿಲ್ಲ. ಮದವೇರಿದ ಆನೆಯಂತೂ ತನ್ನೆದುರು ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡುತ್ತೆ. ಆದರೆ ನಾಯಿ ಹಾಗಲ್ಲ. ಅದು ನೆಲದ ಸಮೀಪ ಇರುತ್ತದೆ. ಬೀದಿ ನಾಯಾಗಿದ್ದರೂ ಅದು ಆ ಬೀದಿಗೆ ನಿಷ್ಠವಾಗಿರುತ್ತದೆ. ಸಾಕು ನಾಯಾಗಿದ್ದರೆ ಮಾಲೀಕನಿಗೆ ನಿಷ್ಠವಾಗಿರುತ್ತದೆ. ಮುಖ್ಯವಾಗಿ ನಾಯಿ ವಾಸನೆಯನ್ನು ಗ್ರಹಿಸುತ್ತದೆ. ಅದಕ್ಕಾಗಿಯೇ ಪೋಲಿಸ್ ಇಲಾಖೆಯಲ್ಲಿ ಅಪರಾದ ತನಿಖೆಗಾಗಿ ಶ್ವಾನದಳವಿದೆ. ಆದರೆ ಆನೆಗೆ ವಾಸನಾಗ್ರಹಿಕೆಯಿಲ್ಲ.

ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಾಯಿಗೆ ಪ್ರೀತಿಸಲು ಬರುತ್ತದೆ. ಅದಕ್ಕೆ ಮನುಷ್ಯನ ಪ್ರೀತಿ ಬೇಕು; ಮನುಷ್ಯನಿಗೂ ಪ್ರೀತಿಸಲು ನಾಯಿ ಬೇಕು. ಆನೆಯಿಂದ ಇವೆರಡನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಪತ್ರಿಕೋದ್ಯಮದ ಬ್ರೂಟಸ್ ಗಳು



ಕಳೆದ ಸೋಮವಾರ ಕನ್ನಡಪ್ರಭದ ಸಂಪಾದಕರಾದ ಶಿವಸುಬ್ರಹ್ಮಣ್ಯ ಅವರು ಎಂದಿನಂತೆ ಬೆಳಿಗ್ಗೆ ೧೦ ಘಂಟೆಗೆ ಕೀನ್ಸ್ ರೋಡಿನಲ್ಲಿರುವ ತಮ್ಮ ಅಪೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ರಿಸೆಪ್ಷನ್ ಹತ್ತಿರ ತಲುಪುವಾಗಲೇ ಅವರಿಗೆ ಗೊತ್ತಾಯಿತು. ಮೂರನೆಯ ಮಹಡಿಯಲ್ಲಿರುವ ತಮ್ಮ ಅಪೀಸಿನಲ್ಲಿ ಅದಾಗಲೇ ನೂತನ ಸಂಪಾದಕರಾದ ವಿಶ್ವೇಶರಭಟ್ಟರು ಎಡಿಟೋರಿಯಲ್ ಮೀಟಿಂಗ್ ನಡೆಸುತ್ತಿದ್ದಾರೆಂದು.

ತನ್ನ ಬೆನ್ನ ಹಿಂದೆಯೇ ಹೀಗೊಂದು ಸಂಚು ನಡೆಯುತ್ತಿದೆಯೆಂಬುದರ ಲವ ಲೇಶವೂ ಅರಿವಿಲ್ಲದ ಅವರಿಗದು ಷಾಕಿಂಗ್ ನ್ಯೂಸ್. ಆದರೂ ಸಾವರಿಸಿಕೊಂಡು ತಮ್ಮ ಚೇಂಬರಿಗೆ ಹೋದವರೇ ರಾಜಿನಾಮೆಯನ್ನು ಬರೆದು ಆಡಳಿತ ಮಂಡಳಿಯ ಮುಂದಿಟ್ಟರು. ರಾಜಿನಾಮೆಯನ್ನು ಒಪ್ಪಿಕೊಳ್ಳದ ಮನೋಜಕುಮಾರ್ ಸಂತಾಲಿಯ ಸಂಧಾನಕ್ಕಾಗಿ ವಿಶ್ವೇಶಭಟ್ಟರನ್ನೇ ಶಿವಸುಬ್ರಹ್ಮಣ್ಯರವರ ಚೆಂಬರಿಗೆ ನುಗ್ಗಿಸಿದರು. ಹವ್ಯಕ ಭಾಷೆಯಲ್ಲೇ ಮಾತು ಪ್ರಾರಂಭಿಸಿದ ಭಟ್ಟರು ಅವರನ್ನು ಒಲಿಸಿಕೊಳ್ಳವ ಪ್ರಯತ್ನ ಮಾಡತೊಡಗಿದರು. ನಂಬಿಕೆ ದ್ರೋಹದ ಕಡು ಕಹಿಯನ್ನುಂಡ ಶಿವಸುಬ್ರಹ್ಮಣ್ಯ ಅಲ್ಲಿಂದ ಎದ್ದು ಬಂದವರೇ ಯಾರಿಗೂ ಸಿಗದೆ ಭೂಗತರಾಗಿಬಿಟ್ಟರು. ಅವರ ಚೇಂಬರಿನಲ್ಲಿ ಅವರದೇ ಆದ ಕೆಲವು ವಸ್ತುಗಳಿದ್ದವು. ಮರುದಿನ ಬೆಳಿಗ್ಗೆ ಆರು ಘಂಟೆಗೆ ಆಪೀಸಿಗೆ ಹೋದವರೇ ಅದನ್ನೆಲ್ಲಾ ತಂದು ಮನೆಯಲ್ಲಿಟ್ಟು ಹೆಗಲ ಮೇಲೆ ಕ್ಯಾಮರಾ ತಗುಲಿಸಿಕೊಂಡು ವನ್ಯದಾಮವೊಂದರತ್ತ ಹೆಜ್ಜೆ ಹಾಕಿದರು.

ಕನ್ನಡಪ್ರಭದ ಸಂಪಾದಕ ಹೆಚ್.ಆರ್. ರಂಗನಾಥ್ ಮೂರು ಡಜನ್ ಪತ್ರಕರ್ತರ ಹಿಂಡನ್ನು ಹಿಂದಿಟ್ಟುಕೊಂಡು ಸುವರ್ಣ ನ್ಯೂಸ್ ಚಾನಲ್ ಗೆ ಗುಳೆ ಹೋದಾಗ ಇರುವ ಹುಡುಗರನ್ನೇ ಕಟ್ಟಿಕೊಂಡು ಪತ್ರಿಕೆಯನ್ನು ಜನಪರವಾಗಿ ಮುನ್ನಡೆಸಿದವರು ಇದೇ ಶಿವಸುಬ್ರಹ್ಮಣ್ಯ. ಹಾಗಾಗಿ ಮ್ಯಾನೇಜ್ಮೆಂಟ್ ತನ್ನ ಕೈ ಬಿಡಲಾರದೆಂದು ಅವರು ಬಲವಾಗಿ ನಂಬಿದ್ದರು. ನಂಬಿಕೆ ದ್ರೋಹ ನಡೆದುಹೋಯ್ತು. ಶತಮಾನದ ಇತಿಹಾಸವಿರುವ, ಸದಾ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಬಂದ ಪತ್ರಿಕೆಯೊಂದು ತನ್ನ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿತ್ತು.

ಅದುವರೆಗೆ ಕನ್ನಡಪ್ರಭದಲ್ಲಿ ಶೇ ೨೫ ರಷ್ಟು ಷೇರುಗಳನ್ನು ಹೊಂದಿದ್ದ ಸಂಸದ ರಾಜೀವ ಚಂದ್ರಶೇಖರ್ ಅವರು ಅಂದೇ ಇನ್ನೂ ಶೇ.೫೦ ಷೇರುಗಳನ್ನು ಖರೀದಿಸಿದ್ದರು. ಕನ್ನಡಪ್ರಭದಲ್ಲಿ ಶೇ ೭೫ರಷ್ಟು ಷೇರುಗಳನ್ನು ಹೊಂದಿದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ಉದ್ಯಮವನ್ನು ವಿಸ್ತರಿಸುವ ’ಸ್ಟಾರ್’ ಪತ್ರಕರ್ತನ ಅವಶ್ಯಕತೆಯಿತ್ತು. ವಿಶ್ವೇಶಭಟ್ಟರಿಗೂ ನೆಲೆಯೊಂದು ಬೇಕಾಗಿತ್ತು.

ಇದು ವರ್ತಮಾನದ ವಿಚಾರ. ಭೂತಕಾಲದ ಘಟನೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೇ ರಾಜೀವ್ ಚಂದ್ರಶೇಖರ್ ಮಲೆಯಾಳಿ ಚಾನಲ್ ಏಷಿಯಾನೆಟ್ ಸಹಭಾಗಿತ್ವದಲ್ಲಿ ಕನ್ನಡದಲ್ಲಿ ಏಷಿಯಾನೆಟ್ ಸುವರ್ಣ ಎಂಬ ಮನೋರಂಜನಾ ಚಾನಲ್ ಆರಂಭಿಸಿದರು. ಈ ಹಿಂದೆ ಏಷಿಯಾನೆಟ್ ನಲ್ಲಿ ಕೆಲಸ ಮಾಡಿದ್ದ ಶಶಿಧರ್ ಭಟ್ ಆ ಚಾನಲ್ ಮುಖ್ಯಸ್ಥರಾದರು. ಅದು ಗುಣಮಟ್ಟದ ಕಾರ್ಯಕ್ರಮ ನೀಡತೊಡಗಿತು. ಇದರಿಂದ ಉತ್ತೇಜಿತರಾದ ಮ್ಯಾನೇಜ್ಮೆಂಟ್ ಆರೇ ತಿಂಗಳಲ್ಲಿ ಸುವರ್ಣ ಸುದ್ದಿವಾಹಿನಿ ಆರಂಭಿಸಿತು.

ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ನಿಂದ ಸುವರ್ಣ ಚಾನಲ್ ಅನ್ನು ಖರೀದಿಸಿದರು. ಅನಂತರ ಸುವರ್ಣ ಮನೋರಂಜನಾ ಚಾನಲ್ ಅನ್ನು ಸ್ಟಾರ್ ಗ್ರೂಫ್ ಗೆ ಮಾರಿದರು.

ಅದು ೨೦೦೯ರ ಅಗಸ್ಟ್ ತಿಂಗಳ ಒಂದು ದಿನ ಎಂದಿನಂತೆ ಬೆಳಿಗ್ಗೆ ೯.೩೦ ಘಂಟೆಗೆ ಶಶಿಧರ್ ಭಟ್ ತಮ್ಮ ಅಪೀಸಿಗೆ ಬಂದಿದ್ದಾರೆ. ಚಾನಲ್ ಸಿ.ಇ.ಓ ಸಂಜಯ ಪ್ರಭು. ಶಶಿಧರ್ ಭಟ್ ಅವರನ್ನು ತಮ್ಮ ಚೇಂಬರಿಗೆ ಕರೆಸಿಕೊಂಡವರೇ ನಿಮ್ಮನ್ನು ಚೇರ್ಮನ್ ಅವರ ಮೀಡಿಯಾ ಅಡೈಸರ್ ಆಗಿ ನೇಮಕ ಮಾಡಲಾಗಿದೆ ಎಂದರು. ನಾನು ರಾಜಕಾರಣಿಯೊಬ್ಬರ ಅಧಿಕೃತ ಮೀಡಿಯಾ ಅಡೈಸರ್ ಆಗಿ ಕೆಲಸ ನಿರ್ವಹಿಸಲಾರೆ ಎಂದು ಆ ಹುದ್ದೆಯನ್ನು ಭಟ್ ನಿರಾಕರಿದ್ದಾರೆ. ಆಗ ಅವರನ್ನು ರಾಜೀವ್ ಚಂದ್ರಶೇಖರ್ ಅವರ ಎಲ್ಲಾ ವ್ಯವಹಾರಗಳ ಆಡಳಿತ ಕೇಂದ್ರವಾದ ಜ್ಯುಪಿಟರ್ ಗೆ ವರ್ಗಾವಣೆ ಪ್ರಸ್ತಾಪ ಮಾಡಿದ್ದಾರೆ. ಬದುಕು ನಿರ್ವಹಣೆಗೆ ಸಂಬಳವನ್ನೇ ನೆಚ್ಚಿಕೊಂಡಿದ್ದ ಭಟ್ಟರು ತಾತ್ಕಾಲಿಕವಾಗಿ ಅದನ್ನು ಒಪ್ಪಿಕೊಂಡಿದ್ದಾರೆ. ಆಗ ಅಸಲಿ ವಿಚಾರಕ್ಕೆ ಬಂದ ಸಂಜಯ ಪ್ರಭು ಸುವರ್ಣ ಸುದ್ದಿವಾಹಿನಿ ಮುಖ್ಯಸ್ಥರಾಗಿ ರಂಗನಾಥ್ ಬರುತ್ತಿದ್ದಾರೆಂಬ ಸುದ್ದಿ ಬಹಿರಂಗ ಪಡಿಸಿದ್ದಾರೆ. ಬಟ್ಟರಿಗದು ಶಾಕಿಂಗ್ ನ್ಯೂಸ್; ಎರಡೂ ಕಡೆಯಿಂದಲೂ. ಮ್ಯಾನೇಜ್ಮೆಂಟ್ ಎಂದೂ ನೌಕರರ ಪರವಾಗಿರಲಾರದು. ಆದರೆ ತಮ್ಮ ಮನೆಯಲ್ಲಿ ಒಂದಷ್ಟು ಕಾಲ ಇದ್ದ ಹುಡುಗ ತಮಗೊಂದು ಮಾತೂ ಹೇಳಲಿಲ್ಲ ಎಂಬ ನೋವು ಅವರಿಗುಂಟಾಯಿತು. ಈ ಶಾಕಿನಲ್ಲಿರುವಾಗಲೇ ಸಂಜಯ ಪ್ರಭು ಇನ್ನೊಂದು ಮಾತು ಸೇರಿಸಿದರು, ’ಇಂದು ನೀವು ಮನೆಗೆ ಹೊರಟು ಬಿಡಿ. ರಂಗನಾಥ್ ಮದ್ಯಾಹ್ನದ ಮೇಲೆ ಅಧಿಕಾರ ವಹಿಸಿಕೊಳ್ಳಲು ಬರುತ್ತಿದ್ದಾರೆ. ನಿಮ್ಮ ಮುಖವನ್ನು ನೋಡಲು ಅವರು ಇಷ್ಟಪಡಲಾರರು.’

ಭವಿಷ್ಯದಲ್ಲಿ ಸಂಭವಿಸಬಹುದಾದ ಒಂದು ಘಟನೆಯ ಬಗ್ಗೆ ಹೇಳುತ್ತೇನೆ. ಉದಯವಾಣಿಯ ಸಂಪಾದಕರಾಗಿ ಇದೇ ಎಚ್.ಆರ್.ರಂಗನಾಥ್ ಅವರ ಶಿಷ್ಯ, ಕನ್ನಡಪ್ರಭದ ಮಾಜಿ ನೌಕರ, ಸುವರ್ಣದ ಹಾಲಿ ನೌಕರ ರವಿಹೆಗ್ಡೆ ನೇಮಕವಾಗಿದ್ದಾರೆಂದು ಕನ್ನಡಪ್ರಭದ ಮಾಜಿ ನೌಕರ ಸುವರ್ಣ ಸುದ್ದಿವಾಹಿನಿಯ ಹಾಲಿ ನೌಕರ ಜೋಗಿಯವರು ಪೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಸುದ್ದಿ ಉದಯವಾಣಿಯ ಹಾಲಿ ಸಂಪಾದಕ ತಿಮ್ಮಪ್ಪ ಭಟ್ಟರಿಗೆ ಗೊತ್ತೇ ಇಲ್ಲ. ಆಡಳಿತ ಮಂಡಳಿಯವರು ಅವರಿಗೆ ಇದುವರೆಗೆ ಏನನ್ನೂ ಹೇಳಿಲ್ಲ. ಅಂದರೆ ಒಂದು ದಿನ ಭಟ್ಟರು ಕೂಡಾ ಮೌನವಾಗಿ ಉದಯವಾಣಿಯ ಮೆಟ್ಟಲಿಳಿದು ಬರಬೇಕಾಗಿದೆ.

ಪ್ರತಿಯೊಂದು ಹುದ್ದೆಗೂ ಒಂದು ಸ್ಥಾನ ಗೌರವ ಅನ್ನುವುದಿದೆ. ರಾಜ್ಯಪಾಲರಿರಲಿ, ಸ್ಪೀಕರ್ ಇರಲಿ, ಮುಖ್ಯಮಂತ್ರಿಗಳಿರಲಿ, ನ್ಯಾಯಸ್ಥಾನದಲ್ಲಿ ಕುಳಿತುಕೊಳ್ಳುವ ನ್ಯಾಯಮೂರ್ತಿಗಳಾಗಲಿ, ಒಂದು ಸುದ್ದಿ ಚಾನಲ್ ಮುಖ್ಯಸ್ಥರಿರಲಿ ಅಥವಾ ಪತ್ರಿಕೆಯ ಸಂಪಾದಕರಿರಲಿ ಆ ಸ್ಥಾನದಲ್ಲಿ ಕುಳಿತಾಗ ಅವರು ಕೇವಲ ಒಬ್ಬ ವ್ಯಕ್ತಿಯಾಗಿರುವುದಿಲ್ಲ. ಆ ಹುದ್ದೆಯಲ್ಲಿ ಕುಳಿತು ಕೈಗೊಳ್ಳುವ ತೀರ್ಮಾನಗಳು ನೇರವಾಗಿ ಸಮಾಜದ ಮೇಲೆ ಪರಿಣಾಮ ಬೀರುವಂತದ್ದಾಗಿರುತ್ತದೆ. ಹಾಗಾಗಿ ಒಬ್ಬರನ್ನು ಆ ಸ್ಥಾನಕ್ಕೆ ಎಷ್ಟು ಗೌರವದಿಂದ ಬರಮಾಡಿಕೊಳ್ಳುತ್ತೇವೆಯೋ ಅಷ್ಟೇ ಗೌರವದಿಂದ ಅವರನ್ನು ಬೀಳ್ಕೊಡಬೇಕು. ವಿಜಯ ಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರ ಮೇಲೆ ಆರೋಪಗಳ ಸರಮಾಲೆ ಇದ್ದರೂ ಟೈಮ್ಸ್ ಗ್ರೂಪಿನವರು, ಭಟ್ಟರು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆಂದು ಅವರನ್ನು ಗೌರವದಿಂದ ಬೀಳ್ಕೊಟ್ಟರು. ಅದು ಎಲ್ಲರಿಗೂ ಯಾಕೆ ಸಾಧ್ಯವಾಗುತ್ತಿಲ್ಲ? ಹುದ್ದೆಯ ಗೌರವ ಮತ್ತು ಜವಾಬ್ದಾರಿಯ ಅರಿವಿಲ್ಲದ ಹುಂಬರು ಮಾತ್ರ ರಾಜ್ಯಪಾಲರಿಗೆ ಕಪಾಳ ಮೋಕ್ಷ ಮಾಡುವ ಮಾತಾಡುತ್ತಾರೆ. ಅದು ಕೂಡ ಪ್ರತಾಪ ಸಿಂಹ ಎಂಬ ಯುವಪತ್ರಕರ್ತನ ಬಾಯಿಯಿಂದ ಉದುರುತ್ತದೆ. ಅವರ ಅಭಿಮಾನಿಗಳು ರಾಜ್ಯಪಾಲರನ್ನು ಅರಬ್ಬಿಸಮುದ್ರಕ್ಕೆ ಎಸೆಯಿರಿ, ತಲೆಕೆಟ್ಟಿದೆ ಕಂಕನಾಡಿಗೆ ಸೇರಿಸಿ, ಈಡಿಯೆಟ್ ಎಂದೆಲ್ಲಾ ಪ್ರತಾಪಸಿಂಹರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ವಿಶ್ವೇಶಭಟ್ಟರು ಎಂತಹ ತಳಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದಿಗಿಲಾಗುತ್ತದೆ.

ಪತ್ರಿಕೋದ್ಯಮದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ರಾಮಾಯಣವಾದೀತು! ಇಲ್ಲಿ ಕೊರಳ ಗೆಳೆಯರಾಗಿದ್ದವರು ಜನ್ಮ-ಜನ್ಮಾಂತರದ ವೈರಿಗಳಂತೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗುತ್ತಾರೆ. ಪತ್ರಕರ್ತರು ಮನೆ, ಸೈಟ್, ಲ್ಯಾಪ್ ಟ್ಯಾಪ್, ಕಾರು, ತಿಂಗಳ ಪೇಮೆಂಟ್ ಗಳಿಗೆ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ.

ಇದನ್ನೆಲ್ಲಾ ಗಮನಿಸುತ್ತಿರುವಾಗ ಇವರು ಭಾವಿ ಪತ್ರಕರ್ತರಿಗೆ ಯಾವ ರೀತಿಯಲ್ಲಿ ಮಾದರಿಗಳಗುತ್ತಿದ್ದಾರೆ? ಯಾವ ಮೌಲ್ಯಗಳನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.ಸಾಮಾಜಿಕ ನ್ಯಾಯಕ್ಕಾಗಿ ಸದಾ ಧ್ವನಿಯೆತ್ತುತ್ತಿದ್ದ ಪ್ರಜಾವಾಣಿಯಂತ ಪತ್ರಿಕೆಯನ್ನೇ ಆಳುವ ಸರಕಾರ ಅಪರೇಷನ್ ಕಮಲಕ್ಕೆ ಒಳಪಡಿಸಿಕೊಂಡಿದೆಯೆಂದ ಮೇಲೆ ಸಾಮಾನ್ಯ ಪತ್ರಕರ್ತ ಆಮಿಷಗಳಿಗೆ ಬಲಿಯಾಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ನನ್ನ ಪರಿಚಿತರೊಬ್ಬರ ಮಗಳ ಕಥೆ ಕೇಳಿ; ಆಕೆಗೆ ರಂಗಭೂಮಿ, ಸಾಹಿತ್ಯ, ಸಂಗೀತದ ಹಿನ್ನೆಲೆಯಿತ್ತು. ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆಕೆಗೆ ಮೆಡಿಕಲ್, ಇಂಜಿನಿಯರ್ ಓದಲು ಅವಕಾಶ ಸಿಕ್ಕಿದರೂ ಆಸಕ್ತಿಯಿಂದ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಳು . ತನ್ನ ಬೇರುಗಳು ಇನ್ನಷ್ಟು ಗಟ್ಟಿಯಾಗಲೆಂದು ಕಳೆದ ವರ್ಷ ಕನ್ನಡಪ್ರಭದಲ್ಲಿ ಇಂಟರ್ನ್ಶಿಪ್ ಮಾಡಿದ್ದಳು. ಅಲ್ಲಿನ ಹಿರಿಯ ಪತ್ರಕರ್ತರು ’ನೀನು ಪತ್ರಕರ್ತಳೇ ಆಗು. ಆದರೆ ಕನ್ನಡ ಪತ್ರಕೋದ್ಯಮಕ್ಕೆ ಮಾತ್ರ ಬರಬೇಡ’ ಎಂದು ಹರಸಿ ಕಳುಹಿಸಿದ್ದರು. ಆದರೆ ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ರಾಜಕಾರಣವನ್ನೂ ಮೀರಿ ನಡೆಯುತ್ತಿರುವ ಹೊಲಸುಗಾರಿಕೆಯನ್ನು ನೋಡಿ ಆಕೆ ಜುಗುಪ್ಸೆಗೊಂಡಿದ್ದಾಳೆ. ತನ್ನ ಆಸಕ್ತಿಯನ್ನು ಬದಲಿಸಿಕೊಂಡು ಸೈಕಾಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೆಲ್ಲಾ ಬರೆಯಲು ನನಗೆ ಸ್ಫೂರ್ತಿ ಸಿಕ್ಕಿದ್ದು ಯಾರಿಂದ ಗೊತ್ತಾ? ಕನ್ನಡದ ಸಂವೇದನಾಶೀಲ ಬರಹಗಾರ ಹಾಗೂ ಸಜ್ಜನ ಚಂದ್ರಶೇಖರ ಆಲೂರರಿಂದ. ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ಬಗ್ಗೆ ನೀಡಿದ ಅಭಿಪ್ರಾಯಗಳಿಂದ. ಇದರಿಂದ ಅವರು ಎರಡು ಶಕ್ತಿಗಳನ್ನು ಎದುರು ಹಾಕಿಕೊಂಡರು. ಒಂದು ಪ್ರಜಾವಾಣಿಯಂತ ಪತ್ರಿಕೆಯನ್ನು. ಇನ್ನೊಂದು ಸಾಹಿತ್ಯದ ಪ್ರಭಲ ಶಕ್ತಿ ಕೇಂದ್ರಗಳಲ್ಲಿ ಒಂದಾದ ಹೆಗ್ಗೊಡನ್ನು.

ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಕೂಡಾ ಮೌನವಾಗಿದ್ದರೆ ಅದು ವ್ಯವಸ್ಥೆಯನ್ನು ಪೋಷಿಸಿದಂತಾಗುತ್ತದೆ. ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗದೇ ಇರಬಹುದು. ಆದರೆ ಪ್ರತಿಭಟನೆ ನಮ್ಮ ಸಂವಿಧಾನಿಕ ಹಕ್ಕು. ಅದು ಪ್ರಜಾಪ್ರಭುತ್ವದ ಜೀವಾಳ.

ವಿಶ್ವೇಶಭಟ್ಟರು ಹೋದರು ಶಶಿಧರ್ ಭಟ್ಟರು ಬಂದರು !

ಕಳೆದ ವಾರ ವಿಜಯಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರು ರಾಜೀನಾಮೆ ಕೊಟ್ಟಾಗ ನನ್ನ ಗೆಳತಿಯೊಬ್ಬಳು ಪ್ರತಿಕ್ರಿಯಿಸಿದ್ದು ಹೀಗೆ; ಇದು ಪತ್ರಿಕೋದ್ಯಮದ ನೈತಿಕತೆಗೆ ಸಿಕ್ಕಿದ ಜಯ.

ಈ ಮಾತು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಇತ್ತೀಚಿಗಿನ ವರ್ಷಗಳಲ್ಲಿ ಪತ್ರಿಕಾರಂಗವು ಒಂದು ಉದ್ಯಮವಾಗಿ ಬೆಳೆದ ಬಗೆ ಮತ್ತು ಅದರ ಲಾಭಾಂಶವನ್ನು ಪಡೆಯುತ್ತಿರುವ ದೊಡ್ಡ ಪಡೆ ಸೃಷ್ಟಿಯಾಗಿರುವುದನ್ನು ಗಮನಿಸಿದಾಗ ಇದರಲ್ಲಿ ಹುರುಳಿದೆ ಎನಿಸದಿರದು.

ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಾಂಗಗಳ ಜೊತೆಗೆ ಪತ್ರಿಕಾರಂಗವನ್ನು ನಾಲ್ಕನೆಯ ಸ್ತಂಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ನಾಲ್ಕು ಸ್ತಂಭಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಹಾಗಾಗುತ್ತಿದೆಯೇ?

ಆಳುವ ದೊರೆಗಳು ದಾರಿ ತಪ್ಪಿದಾಗ ಜನ ಮಾಧ್ಯಮದತ್ತ ನೋಡುತ್ತಾರೆ. ಆದರೆ ಸಮಾಜದ ಸಾಕ್ಷಿಪ್ರಜ್ನೆಯಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಒಂದು ಪಕ್ಷದ, ಒಂದು ವ್ಯಕ್ತಿಯ ತುತ್ತೂರಿಯಾಗಿಬಿಟ್ಟರೆ....?ಪತ್ರಕರ್ತರು ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ಹೆಣ್ಣು -ಹೊನ್ನು-ಮಣ್ಣನ್ನು ಪುಕ್ಕಟೆಯಾಗಿ ಪಡೆದುಕೊಳ್ಳಲು ಮಾಧ್ಯಮವನ್ನು ಅಸ್ತ್ರದಂತೆ ಬಳಸತೊಡಗಿದರೆ....?ಗುಂಪುಗಾರಿಕೆ, ಸ್ವಜನಪಕ್ಷಪಾತದಲ್ಲಿ ರಾಜಕಾರಣಿಗಳನ್ನೂ ಮೀರಿಸತೊಡಗಿದರೆ.....?ಜನರು ಮಾಧ್ಯಮವನ್ನು ಸಂಶಯದಿಂದಲೇ ನೋಡುತ್ತಾರೆ. ಸಾಮಾಜೀಕ ನ್ಯಾಯ ಎಂಬ ಪರಿಕಲ್ಪನೆಯೇ ಹುಸಿಯಾಗುತ್ತದೆ.

ರಾಡಿಯಾ ಟೇಪ್ ಹಗರಣದಿಂದ ಹಿಡಿದು ವಿಶ್ವೇಶಭಟ್ಟರ ರಾಜೀನಾಮೆ ಪ್ರಕರಣದವರೆಗೆ ಜನ ಮುಕ್ತವಾಗಿ ಮಾತಾಡುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಆದರೆ ಮಾಧ್ಯಮ ಇದರ ಬಗ್ಗೆ ಮುಗುಮ್ಮಾಗಿ ಮುಸುಕು ಹೊದ್ದು ಕುಳಿತಿದೆ. ತಮ್ಮ ಸ್ವಂತದ ಪೇಸ್ ಬುಕ್, ಬ್ಲಾಗ್ ಗಳಲ್ಲಿಯೂ ಬರೆಯಲೂ ಹೆದರುತ್ತಿದ್ದಾರೆ. ರಾಜಕಾರಣಿಗಳಂತೂ ಪತ್ರಕರ್ತರ ಸಹವಾಸದಿಂದಲೇ ದೂರವಿದ್ದರೆ ಒಳಿತು ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ಟೆರರಿಸಂ ಎಂದರೆ ಇದೇ ಇರಬಹುದೇ?

ಇಂತಹ ಸನ್ನಿವೇಶದಲ್ಲಿ ’ಸಮಯ ನ್ಯೂಸ್’ ವಾಹಿನಿಯ ಮುಖ್ಯಸ್ಥರಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಟ್ಟರು ’ಸುವರ್ಣ ನ್ಯೂಸ್’ ಚಾನಲ್ ಅನ್ನು ಕಟ್ಟಿ ಬೆಳೆಸಿದ್ದರು. ಅನಂತರ ಅದನ್ನು ಎಚ್.ಆರ್. ರಂಗನಾಥ್ ಆಕ್ರಮಿಸಿಕೊಂಡಿದ್ದರು.

ಸುವರ್ಣ ನ್ಯೂಸ್ ಚಾನಲ್ ಆರಂಭಗೊಂಡಾಗ ಭಟ್ಟರು ಸೂತ್ರದ ಗೊಂಬೆಯಂತಿದ್ದರು. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿ ರಾಜೀವ ಚಂದ್ರಶೇಖರ ಚಾನಲ್ ಮಾಲೀಕರಾಗಿದ್ದರು. ಹಿರಿಯ ನಟಿ ಮೈನಾವತಿ ಮಗ ಶ್ಯಾಮಸುಂದರ್ ಸಿಇಓ ಆಗಿದ್ದರು. ಅವರ ನಿಧನದ ನಂತರ ಸಿಇಓ ಆಗಿ ಬಂದವರು ಸಂಜಯಪ್ರಭು. ಅವರಿಗೆ ಕನ್ನಡ ಬಾರದು. ಕನ್ನಡ ಬಾರದ ಮಾಲೀಕ ಮತ್ತು ಸಿಇಓ. ಅವರ ದೃಷ್ಟಿಯಲ್ಲಿ ಪತ್ರಕರ್ತರು ಕೂಡಾ ಕಾರ್ಮಿಕರೇ.
ಚಾನಲ್ ನಲ್ಲೇ ಗುಂಪುಗಳಾದವು. ಭಟ್ಟರ ವಿರುದ್ಧ ಗುಂಪನ್ನು ಸಿಇಓ ಎತ್ತಿಕಟ್ಟಿದರು. ಈ ಸಮಯದಲ್ಲೇ ಕನ್ನಡಪ್ರಭದ ರಂಗನಾಥ್ ಚಾನಲ್ ಮುಖ್ಯಸ್ಥರಾದರು. ಪತ್ರಕರ್ತರಾಗಿದ್ದೂ ಬ್ಯುಸಿನೆಸ್ ಮ್ಯಾನ್ ಆಗಿರುವ ರಂಗನಾಥ್ ಮಾಲೀಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾ ಪರಸ್ಪರ ಆಸರೆಯಾಗತೊಡಗಿದರು. ಶಶಿಧರ್ ಭಟ್ ರನ್ನು ಜ್ಯುಪಿಟರ್ ಗೆ ವರ್ಗಯಿಸಲಾಯ್ತು. ಕನ್ನಡಪ್ರಭದಿಂದ ಜೋಗಿ, ರವಿಹೆಗ್ಡೆ, ಉದಯ ಮರಕಿಣಿ ಸೇರಿದಂತೆ ಸುಮಾರು ೫೦ ಜನರ ದಂಡು ಸುವರ್ಣಕ್ಕೆ ಧಾಳಿಯಿಟ್ಟಿತು. ಖರ್ಚು ದುಪ್ಪಟ್ಟಾಯಿತು. ಕೆಲಸವಿಲ್ಲದೆ ಕುಳಿತ್ತಿದ್ದ ಭಟ್ಟರು ಸುವರ್ಣ ಗ್ರೂಪ್ ಬಿಟ್ಟು ಹೊರನಡೆದರು.

ಈಗ ಶಶಿದರ್ ಭಟ್ ಸಮಯ ನ್ಯೂಸ್ ಚಾನಲ್ ಹೆಡ್ ಆಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿದ್ದಂತೆ ನಿರಾಯುಧರಲ್ಲ. ಶಸ್ತ್ರ ಸಜ್ಜಿತರಾಗಿ ಬಂದಿದ್ದಾರೆ. ಜೊತೆಗೆ ಕೈಯಲ್ಲಿ ಕತ್ತರಿ ಇದೆ.
ಅಲ್ಲಿ ವಿಜಯಕರ್ನಾಟಕದಲ್ಲಿ ತಾತ್ಕಾಲಿಕ ಸಂಪಾದಕರಾಗಿರುವ ಇ. ರಾಘವನ್ ಅವರು ಶುದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಸ ಸಂಪಾದಕರ ಆಗಮನವನ್ನು ಪತ್ರಿಕೆ ಕಾಯುತ್ತಿದೆ. ಕಳಂಕ ರಹಿತ, ಪ್ರಾಮಾಣಿಕ ಪತ್ರಕರ್ತರಾದ ದಿನೇಶ್ ಅಮಿನಮಟ್ಟು ಹೆಸರು ಮುಂಚೂಣಿಯಲ್ಲಿದೆ. ಅವರು ಆ ಹುದ್ದೆಯನ್ನು ಅಲಂಕರಿಸಿದರೆ ನಿಜವಾಗಿಯೂ ನಿಶಾದ ಕಂಜರಿ ಖುಷಿ ಪಡುತ್ತಾಳೆ.

ದೃಶ್ಯ ಮಾಧ್ಯಮದಲ್ಲಿ ಶಶಿಧರ್ ಭಟ್, ಮುದ್ರಣ ಮಾಧ್ಯಮದಲ್ಲಿ ಅಮಿನಮಟ್ಟು. ಆಗ ನನ್ನ ಗೆಳತಿ ಹೇಳಿದ ಮಾತು ನಿಜವಾಗುತ್ತದೆ ’ಇದು ಪ್ರಾಮಾಣಿಕ ಪತ್ರಿಕೋಧ್ಯಮಕ್ಕೆ ಸಿಕ್ಕ ನೈತಿಕ ಜಯ’
ಆದರೆ ಹಾಗಾಗುತ್ತದೆಯೇ? ಕಷ್ಟ ಸಾಧ್ಯ.
ಯಾಕೆಂದರೆ ಕನ್ನಡ ಪತ್ರಿಕೋದ್ಯಮ ತುಂಬಾ ಚಿಕ್ಕ ಕ್ಷೇತ್ರ. ಕಳಂಕಿತರೆಲ್ಲಾ ಮತ್ತೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಿರುವ ವಿಚಾರ ನಿಷಾದ ಕಂಜರಿಗೆ ಗೊತ್ತಾಗಿದೆ. ಇರಲಿ. ಭೂಮಿ ಗುಂಡಗಿದೆ. ಎಲ್ಲಾದರೂ ಒಂದು ಕಡೆ ನಾವು ಸಂಧಿಸಲೇ ಬೇಕು!

ಬ್ರೇಕಿಂಗ್ ನ್ಯೂಸ್; ಸುವರ್ಣದಿಂದ ಶಶಿಧರ್ ಭಟ್ ಹೊರಕ್ಕೆ....?

ಕೊನೆಗೂ ಎಚ್ ಆರ್ ರಂಗನಾಥ್ ಶಶಿಧರ್ ಭಟ್ ಅವರನ್ನು ಸುವರ್ಣ ಗ್ರೂಪಿನಿಂದ ಹೊರದೂಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇವತ್ತು ಬೆಳಿಗ್ಗೆ ಭಟ್ಟರನ್ನು ಅವರ ಅಪೀಸಿನಲ್ಲಿ ಕಂಡ ಸಿ.ಇ. ಒ ಸಂಜಯ ಪ್ರಭು, ನಿಮ್ಮ ಮೇಲೆ ಸುವರ್ಣ ನ್ಯೂಸ್ ಮುಖ್ಯಸ್ಥರಾದ ರಂಗನಾಥ್ ಹತ್ತು ಆರೋಪಗಳನ್ನು ಮಾಡಿದ್ದಾರೆ. ಅದಕ್ಕಾಗಿ ನೀವು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರಂತೆ. ಅದಕ್ಕೆ ಭಟ್ಟರು, ನೀವು ಅವರನ್ನು ನಂಬುತ್ತಿರಿ ಅಂದ ಮೇಲೆ ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಎಂದು ಸಂಸ್ಥೆಯಿಂದ ಹೊರಬಂದಿದ್ದಾರೆ.

ಭಟ್ಟರನ್ನು ಹೊರಹಾಕಲು ರಂಗನಾಥನಿಗೆ ಸಿಕ್ಕ ಪ್ರಮುಖ ಕಾರಣವೇನು ಗೊತ್ತಾ? ಸಮಯ ನ್ಯೂಸ್ ಚಾನಲ್ ನ ಉದ್ಘಾಟನೆಯಂದು ಅದರ ಮಾಲೀಕರಾದ ಜಾರಕಿ ಹೊಳೆಯವರು ಭಟ್ಟರನ್ನು ಕೃತಜ್ನತೆಯಿಂದ ಸ್ಮರಿಸಿಕೊಂಡದ್ದು. ಕೃತಜ್ನತೆ ಎಂದರೆನೆಂಬುದು ರಂಗನಾಥನಿಗೆ ಅರ್ಥವಾಗದ ಪದ [ಹೆಚ್ಚಿನ ವಿವರಕ್ಕೆ ಇದೇ ಬ್ಲಾಗಿನಲ್ಲಿ ’ರಂಗನಾಥನೆಂಬ ಸಂಕೇತಿಯೂ ಶಶಿಧರ ಭಟ್ಟರೂ..” ಎಂಬ ಪೋಸ್ಟ್ ಅನ್ನು ನೋಡಿ] ಸುಮಾರು ಹನ್ನೆರಡು ವರ್ಷಗಳ ಹಿಂದೆ-ಆಗ ಭಟ್ಟರು ಝೀ ಟೀವಿ ಮಾಲಕತ್ವದ ಕಾವೇರಿ ಚಾನಲ್ ನ ಮುಖ್ಯಸ್ಥರಾಗಿದ್ದರು-] ಜಾರಕಿ ಹೊಳೆಯವರ ಕೋರಿಕೆಯ ಮೇರೆಗೆ ಕನ್ನಡದಲ್ಲಿ ಚಾನಲ್ಲೊಂದನ್ನು ಪ್ರಾರಂಭಿಸುವುದರ ಕುರಿತಾಗಿ ವಿವರವಾದ ಯೋಜನಾ ವರಧಿಯೊಂದನ್ನು ಸಲ್ಲಿಸಿದ್ದರು. ಸಮಯ ಚಾನಲ್ ಆರಂಭಿಸುವುದಕ್ಕೆ ಅದೇ ತಮಗೆ ಸ್ಪೂರ್ತಿಯಾಗಿತ್ತು ಎಂದು ಅವರು ಕೃತಜ್ನತೆಯಿಂದ ನೆನೆಸಿಕೊಂಡಿದ್ದಾರೆ. ಅದು ಸಮಯ ಚಾನಲ್ ನಲ್ಲಿ ಪ್ರಸಾರವಾಗಿದೆ.

ರಂಗನಾಥ್ ಜಾರಕಿಹೊಳೆಯವರ ಭಾಷಣವನ್ನು ಎಡಿಟ್ ಮಾಡಿಸಿ ಸುವರ್ಣದ ಮಾಲಕರಾದ ರಾಜೀವ್ ಚಂದ್ರಶೇಖರ್ ಅವರಿಗೆ ಕಳುಹಿಸಿದ್ದಾರೆ. ಅದರ ಜೊತೆಗೆ ಭಟ್ಟರ ಮೇಲೆ ಹತ್ತು ಅಪಾದನೆಗಳನ್ನು ಹೊರಿಸಿದ್ದಾರೆ. ಅದರ ಮುಖ್ಯ ತಿರುಳೆಂದರೆ ಭಟ್ಟರು ಚಾನಲ್ಲಿನಲ್ಲಿ ಇದ್ದುಕೊಂಡೇ ಅದರ ಅದಪತನಕ್ಕೆ ಹೇಗೆ ಕಾರಣರಾಗುತ್ತಿದ್ದಾರೆ ಎಂಬುದು. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಸುವರ್ಣದ ಮುಖ್ಯಸ್ಥರಿಗೆ ರಂಗನಾಥ ಹೇಳಿದುದೆಲ್ಲಾ ವೇದ ವಾಕ್ಯವಾಗುತ್ತಿದೆ.

ಪತ್ರಿಕಾರಂಗವನ್ನು ಉದ್ಯಮವೆಂದು ಪರಿಗಣಿಸುವವರಿಗೆ ಪತ್ರಕರ್ತರು ಮತ್ತುದಲ್ಲಾಳಿಗಳ ನಡುವೆ ವ್ಯತ್ಯಾಸ ಗೊತ್ತಾಗಲಾರದು. ಅದರ ಪ್ರಯೋಜನವನ್ನು ಈಗಿನ ಬಹಳಷ್ಟು ಪತ್ರಕರ್ತರು ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಪತ್ರಿಕಾರಂಗವನ್ನು ಸೇವಾಕ್ಷೇತ್ರವೆಂದು ಈಗಲೂ ನಂಬಿರುವ ಕೆಲವು ಮನಸ್ಸುಗಳಿಗಾಗುತ್ತಿರುವ ಆಘಾತ.

ಜೋಕರ್ ಗಳಾದ ಜರ್ನಲಿಸ್ಟ್ ಗಳು





ಇಂದು ಏಪ್ರಿಲ್ ೧. ಮೂರ್ಖರ ದಿನವಂತೆ. ಅಂತೆ ಎನ್ನಲು ಕಾರಣವಿದೆ. ಈಗ ಯಾರೂ ಮೂರ್ಖರ ದಿನ ಆಚರಿಸುವುದಿಲ್ಲ. ಅದು ಅಪ್ರಬುದ್ಧರ ಬಾಲಿಷ ಆಚರಣೆ; ಏನೂ ಮಾಡಲು ಕೆಲಸವಿಲ್ಲದವರು ಹೊತ್ತು ಕಳೆಯಲು ಆಡುವ ಮೋಜಿನಾಟ ಇದು. ಅಂತಹ ಮೋಜಿನಾಟವನ್ನು ಇಂದು ಕನ್ನಡದ ಸುದ್ದಿ ಚಾನಲ್ಲೊಂದು ಆಡಿತು.

ಜಗತ್ತಿನ ಆಗುಹೋಗುಗಳ ಬಗ್ಗೆ ಆಸಕ್ತಿಯಿರುವ ಬಹುತೇಕ ಮಂದಿ ಪ್ರೈಮ್ ಟೈಮ್ ನಲ್ಲಿ ಬರುವ ಸುದ್ದಿಯನ್ನು ವೀಕ್ಷಿಸುತ್ತಾರೆ. ನಾನು ಕೂಡಾ ಇಂದು ೭ ಘಂಟೆಗೆ ಟೀವಿ ಆನ್ ಮಾಡಿದೆ. ’ ಜನಾರ್ಧನ ರೆಡ್ಡಿ ರಾಜಿನಾಮೆ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ; ಕೇಂದ್ರ ನಾಯಕರ ಸಭೆ’ ಎಂಬ ಬ್ರೇಕಿಂಗ್ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿತ್ತು.

ಸಂಜೆಯ ಜಡತ್ವ, ಆಲಸಿತನ ಎಲ್ಲವೂ ತಟ್ಟನೆ ಹಾರಿ ಹೋಗಿ ಕಣ್ಣು, ಕಿವಿ ಚುರುಕಾಯಿತು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಚಾನಲ್ ಗಳನ್ನೆಲ್ಲಾ ಜಾಲಾಡಿದೆ. ಎಲ್ಲಿಯೂ ಆ ಸುದ್ದಿಯ ಸುಳಿವೇಇಲ್ಲ. ಪುನಃ ಅದೇ ಚಾನಲಿಗೆ ಬಂದಾಗ ದೇವೆಗೌಡರು ಪೋನೊದಲ್ಲಿದ್ದರು. ಆ ಮಾತಿನ ವರಸೆ ಕೇಳಿದಾಗ, ಇದು ಗೌಡರಲ್ಲವಲ್ಲಾ ಎನಿಸುತ್ತಿತ್ತು. ಮುಂದೆ ದೇಶಪಾಂಡೆ ಪೋನಿಗೆ ಬಂದರು. ಸಂಶಯ ಹೆಚ್ಚಾಯಿತು. ಖರ್ಗೆ ಪೋನಿಗೆ ಬಂದಾಗ ಇದು ಚಾನಲ್ ನವರು ವಿಕ್ಷಕರನ್ನು ಫೂಲ್ ಮಾಡಲು ನಡೆಸಿದ ಮೂರ್ಖರಾಟ ಎಂದು ಕನ್ಫರ್ಮ್ ಆಯ್ತು. ’ಥೂ ಇವ್ರಾ’ ಎಂದು ಪತ್ರಿಕೋದ್ಯಮದ ಬೇಜವಾಬ್ದರಿತನದ ಬಗ್ಗೆ ಗೊಣಗಿಕೊಂಡೆ. ಅದನ್ನು ಆಲಿಸಿದ ಪಕ್ಕದ ಮನೆಯ ಎಂಟನೆ ಕ್ಲಾಸಿನ ಚೇತೂ ’ನಾವೇ ಏಪ್ರೀಲ್ ಫೂಲ್ ಮಾಡೊಲ್ಲ. ಅವರಿಗೆ ಬುದ್ಧಿ ಇಲ್ವಾ ಆಂಟಿ?’ ಎಂದು ಪ್ರಶ್ನಿಸಿದ.

ಪತ್ರಿಕೆಯಲ್ಲಿ, ಸುದ್ದಿ ಚಾನಲ್ ಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಟೀಮ್ ವರ್ಕ್. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆ ದಂಡ ತೆರಬೇಕಾಗುತ್ತದೆ. ಆದರೆ ಚಾನಲ್ ಮುಖ್ಯಸ್ಥರೆ ಇಂತಹ ಬೇಜವಾಬ್ದಾರಿತನಕ್ಕೆ ಬೆಂಗಾವಲಾಗಿ ನಿಂತರೆ..?ಅವರೇ ಹಿಂದೆ ಕುಳಿತು ಇದನ್ನೆಲ್ಲಾ ಎಂಜಾಯ್ ಮಾಡುತ್ತಿದ್ದುದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ನೀಡುವ ಸುದ್ದಿ ಯಾವ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಟ ಅರಿವಿದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಏಪ್ರಿಲ್ ೧ರಂದು ಓದುಗರನ್ನು ಮೂರ್ಖರನ್ನಾಗಿ ಮಾಡುವ ಕೆಟ್ಟ ಚಾಳಿ ಆರಂಭಿಸಿದ ಕೀರ್ತಿ ಸೇರಬೇಕಾದ್ದು ಈಶ್ವರ ದೈತೋಟರಿಗೆ ಅವರು ಸಂಪಾದಕರಾಗಿದ್ದಾಗ ಇಡೀ ಉದಯವಾಣಿಯನ್ನು ಮೂರ್ಖರವಾಣಿಯನ್ನಾಗಿ ಮಾಡಿದ್ದರು. ಈಗ ’ಕನ್ನಡಪ್ರಭ’ ಕೂಡ ಓದುಗರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ. ಇವತ್ತಿನ ’ಕನ್ನಡಪ್ರಭ’ದ ಮುಖಪಟ ವರಧಿ; ”ಬಿಬಿಎಂಪಿ ಫಲಿತಾಂಶ ಈಗ ಅತಂತ್ರ, ಮರು ಚುನಾವಣೆ? ಮತಯಂತ್ರ ಹಾನಿ,ದತ್ತಾಂಶ ನಾಶ?” ಎಂದು ಹೊಡೆದು ಮಲಗಿಸಿದೆ.

ಇವರೆಲ್ಲಾ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? ಇವರಿಗೆಲ್ಲಾ ಅದೇ ಕೆಲಸವಾಗಿರಬಹುದು. ಆದರೆ ವೀಕ್ಷಕರಿಗಲ್ಲ; ಓದುಗರಿಗಲ್ಲ. ಅವರ ಸಮಯ ಅಮೂಲ್ಯವಾದುದು. ಹಾಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಏಪ್ರಿಲ್ ಫೂಲ್ ಮಾಡಲು ಹೊರಟರೆ ಅವರ ಬಗ್ಗೆ ಮರುಕ ಹುಟ್ಟುತ್ತದೆ

ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?

ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು.
ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.

ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?

ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?

ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!

ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.

ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?

ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.
ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.
ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.

ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?

ರಾಷ್ಟ್ರಪತಿಗಳನ್ನು ಕೇವಲ ಮಹಿಳೆಯಾಗಿ ಕಂಡ ವಿ.ಕ.

ಇವತ್ತಿನ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಎರಡನೆಯ ಸಂಪಾದಕೀಯ ಹೀಗಿದೆ;
ಸುಖೋಯ್ ಶೋಕಿ!
” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”
ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!
ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”
ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.
ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.
ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.