Visitors

ಬಿ.ಬಿ.ಸಿಗೊಂದು ಎಡಿಟೋರಿಯಲ್ ಗೈಡ್ ಲೈನ್ಸ್






ಟೀವಿ ಚಾನಲ್ ಗಳನ್ನು ಕೈ ಯಾಂತ್ರಿಕವಾಗಿ ಬದಲಾಯಿಸ್ತ ಇತ್ತು. ಸುದ್ದಿ ಚಾನಲ್ಲೊಂದರಲ್ಲಿ ’ಪಂಚರಂಗಿ ಪಾಂಚಾಲಿ’ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ’ಸಚ್ ಕ ಸಾಮ್ನ’ ಎಂಬ ರಿಯಾಲಿಟಿ ಶೋದಲ್ಲಿ ತನ್ನ ಅಂತರಂಗದ ಗುಟ್ಟುಗಳನ್ನು ಬಹಿರಂಗಪಡಿಸಿದ ದ್ರೌಪದಿ ಪಾತ್ರಧಾರಿಣಿಯಾಗಿದ್ದ ರೂಪಗಂಗೂಲಿ ಬಿಚ್ಚಿಟ್ಟ ಸತ್ಯಗಳನ್ನಾದರಿಸಿದ ಕಾರ್ಯಕ್ರಮವಿದು.

ಮಂಗಳವಾರ ಪ್ರಸಾರ ಕಂಡ ಈ ಕಾರ್ಯಕ್ರಮವನ್ನು ಉಪೇಕ್ಷಿಸಿ ಚಾನಲ್ ಬದಲಾಯಿಸಿದ್ದೆ. ಯಾಕೆಂದರೆ ಕಾರ್ಯಕ್ರಮ ಪುರುಷ ಪಕ್ಷಪಾತಿಯಾಗಿ ಮುಂದುವರಿಯುತ್ತಿತ್ತು. ಇಂದು ಅದು ನೆನಪಿಗೆ ಬಂತು; ಯಾಕೆಂದರೆ ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಂತೆ. ಅದು ಕೂಡ ಗೊತ್ತಾದದ್ದು ಈಟೀವಿ ನ್ಯೂಸ್ ನಿಂದ.

ಟೀವಿ ರಿಮೋಟ್ ವೀಕ್ಷಕರ ಕೈಯಲ್ಲಿರುತ್ತೆ. ಹಾಗಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುದ್ದಿ ಚಾನಲ್ ಗಳ ಲೈವ್ ಕವರೇಜ್ ಕೆಲವೊಮ್ಮೆ ಮನಸ್ಸನ್ನು ಘಾಸಿಗೊಳಿಸುತ್ತೆ. ಅದರಲ್ಲೂ ದುರ್ಮರಣಕ್ಕಿಡಾದವರ ಆಪ್ತರ ಮುಂದೆ ಸೌಂಡ್ ಬೈಟ್ ಗಾಗಿ ಮೈಕ್ ಹಿಡಿಯುವುದಿದೆಯಲ್ಲಾ ಅದು ತುಂಬಾ ಅಮಾನವೀಯ ಅನ್ನಿಸುತ್ತೆ. ಹಿಂಸೆಯಾಗುತ್ತೆ. ಸಾವನ್ನು, ಅತ್ಯಾಚಾರವನ್ನು ಮಾರ್ಕೇಟ್ ಮಾಡಿಕೊಳ್ಳುವುದು ಅನಾಗರೀಕತೆ ಎನಿಸಿಕೊಳ್ಳುವುದಿಲ್ಲವೇ?

ಸುದ್ದಿ ಚಾನಲ್ ಗಳ ಹಿರಿಯಣ್ಣನಂತಿರುವ ಬಿ.ಬಿ.ಸಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಅದು ತನ್ನ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ಕಳೆದ ಜುಲೈ ಇಂದ ಜಾರಿಗೆ ತಂದಿದೆ.
ಹೀಗೊಂದು ಅಲೋಚನೆ ಅದಕ್ಕೆ ಬರಲು ಕಾರಣವಾದ ಘಟನೆಯೇ ರಷ್ಯನ್ ಫೆಡರೇಷನ್ ನ ಬೆಸ್ಲಾನ್ ಶಾಲಾ ಮಕ್ಕಳ ದುರಂತ
೨೦೦೪ರ ಸೆ.೧ರಂದು ಚೆಚನ್ಯಾ ಬಂಡುಕೋರರು ಬೆಸ್ಲಾನ್ ಶಾಲೆಯ ೧೧೦೦ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸತತ ೫ ದಿನ ಅವರನ್ನು ಸ್ಕೂಲಿನ ಜಿಮ್ ನಲ್ಲಿ ಕೂಡಿ ಹಾಕಲಾಗಿತ್ತು. ಅನ್ನ ನೀರು, ಔಷಧಿ ಸರಬರಾಜಿಗೂ ಉಗ್ರಗಾಮಿಗಳು ಅವಕಾಶ ಕೊಡಲಿಲ್ಲ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ೩೪ ಉಗ್ರಗಾಮಿಗಳಿದ್ದರು. ಜಿಮ್ ನಲ್ಲಿ ಸೊಪೋಕೇಶನ್ ಉಂಟಾಗಿ ಆ ಪುಟ್ಟ ಮಕ್ಕಳು ಪ್ರಜ್ನಾಶೂನ್ಯರಾದರು. ಕ್ರಮೇಣ ಸಾಯತೊಡಗಿದರು. ರಷ್ಯನ್ ಸೈನ್ಯ ಬಂಡುಕೋರರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಹೊತ್ತಿಗೆ ೩೩೪ ಜನ ಸತ್ತಿದ್ದರು. ಅವರಲ್ಲಿ ೧೮೬ ಮಕ್ಕಳಾಗಿದ್ದರು.

ಮೇಲಿನ ಘಟನೆಯನ್ನು ಬಿ.ಬಿ.ಸಿ ಸೇರಿದಂತೆ ಎಲ್ಲಾ ಸುದ್ದಿ ಚಾನಲ್ ಗಳು ಲೈವ್ ಕವರೇಜ್ ನೀಡಿದ್ದವು. ಸತ್ತ ಮಕ್ಕಳನ್ನು ಉಗ್ರಗಾಮಿಗಳು ಶಾಲೆಯಿಂದ ಹೊರಕ್ಕೆ ಎಸೆಯುತ್ತಿದ್ದರು. ಅದನ್ನೆಲ್ಲಾ ನಾವು ಲೈವ್ ಕವರೇಜ್ ನಲ್ಲಿ ನೋಡಿದ್ದೇವೆ. ಸೆ.೧ ಬಾಸ್ಲೇನ್ ಶಾಲೆಯಲ್ಲಿ ’ಡೇ ಅಫ್ ನಾಲೆಡ್ಜ್’ ದಿನ. ಅಂದರೆ ನಮ್ಮ ಶಿಕ್ಷಕರ ದಿನಾಚರಣೆಗೆ ಹತ್ತಿರದ ದಿನದಂತೆ. ಮಕ್ಕಳೆಲ್ಲಾ ತಮ್ಮ ಫೋಷಕರ ಕೈ ಹಿಡಿದುಕೊಂಡು ಪ್ರೀತಿಯ ಟೀಚರ್ ಗೆ ಹೂವು, ಗಿಪ್ಟ್, ಬೆಲೂನ್ ಗಳನ್ನು ಕೊಡಲು ಶಾಲೆಯೊಳಗೆ ಹೋದವರು ಹೆಣವಾಗಿ ಹೊರಬೀಳುತ್ತಿದ್ದರು.

ಬಿ.ಬಿ.ಸಿ ಇದನ್ನು ಲೈವ್ ಕವರೇಜ್ ಮಾಡಿದ ನಂತರದಲ್ಲಿ ಬಹುಶಃ ಬಹಳಷ್ಟು ವಿಚಾರ ವಿಮರ್ಶೆ ನಡೆಸಿರಬೇಕು. ಹಾಗಾಗಿ ಅದು ಸೆನ್ಸಿಟಿವ್ ಲೈವ್ ನ್ಯೂಸ್ ಕವರೇಜ್ ಗೆ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ರೂಪಿಸಿತು. ಸುದ್ದಿಯಲ್ಲಿ ’ವೇಗಕ್ಕಿಂತಲೂ ನಿಖರತೆ ಮುಖ್ಯ’ ಎಂಬುದು ಬ್ರೇಕಿಂಗ್ ನ್ಯೂಸ್ ನ ಬದ್ದತೆ; ಸೆನ್ಸಿಟಿವ್ ನ್ಯೂಸ್ ಅನ್ನು ಪ್ರಸಾರ ಮಾಡುವಾಗ ವಿಳಂಬನೀತಿಯನ್ನು ಅನುಸರಿಸಬೇಕು. ಎಷ್ಟು ವಿಳಂಬಿಸಬೇಕು ಎಂಬುದನ್ನು ಸುದ್ದಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ಇದು ವೀಕ್ಷಕರ ಜೊತೆಗೆ ನಮ್ಮ ಒಪ್ಪಂದ. ಅವರು ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇವು ನಮ್ಮ ಸಂಪಾದಕೀಯದ ನೀತಿ ಮತ್ತು ಮೌಲ್ಯಗಳು’ ಎಂದು ಬಿ.ಬಿ.ಸಿಯ ಸಂಪಾದಕೀಯ ಪಾಲೀಸಿಯ ನಿಯಂತ್ರಕರಾದ ಸ್ಟೀಪನ್ ವೈಟಲ್ ಹೇಳುತ್ತಾರೆ.

ಸಂಸ್ಥೆಯ ಉದೋಗಿಯೊಬ್ಬರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅನ್ನಿಸಿದರೆ ಸಂಪಾದಕೀಯ ಪಾಲಿಸಿಯ ನಿಯಂತ್ರಕರೇ ಅದನ್ನು ಪರಿಸೀಲನೆಗೆ ಒಳಪಡಿಸುತ್ತಾರೆ. ಗೈಡ್ ಲೈನ್ಸ್ ೧೮ ವರ್ಷ ಕೆಳಗಿನ ವೀಕ್ಷಕರ ರಕ್ಶಣೆ, ಕ್ರೈಮ್, ಹಿಂಸೆ ಮತ್ತು ಅಪರಾಧ, ರಿಲೀಜಿಯನ್, ಪ್ರೈವಸಿ ಮತ್ತು ನಿಷ್ಪಕ್ಷಪಾತದ ಮೇಲೆ ಲಕ್ಷ್ಯವನ್ನು ಇಟ್ಟಿದೆ.

ಕ್ರೈಮ್ ಮತ್ತು ಸಮಾಜಘಾತುಕ ನಡವಳಿಕೆಗಳಿಗೆ ಸಂಬಂಧಿಸಿದ ವರಧಿಗಳು ಪ್ರಸಾರವಾಗಬೇಕಾದರೆ ಗೈಡ್ ಲೈನ್ಸ್ ಮುಖ್ಯಸ್ಥರ ಪರಿಶೀಲನೆಗೆ ಒಳಪಡಲೇ ಬೇಕು.

ನಮ್ಮಲ್ಲಿಯೂ ಇಂತಹದೊಂದು ಗೈಡ್ ಲೈನ್ಸ್ ಬೇಕು ಅನ್ನಿಸುತ್ತದೆಯಲ್ಲವೇ?

0 comments:

Post a Comment